ಪಣಜಿ: ಕಳಸಾ–ಬಂಡೂರಿ ಯೋಜನೆ ಜಾರಿಯನ್ನು ತಡೆಯಲು ಗೋವಾ ಸರ್ಕಾರದ ಪ್ರಯತ್ನ ಮುಂದುವರಿದಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಶುಕ್ರವಾರ ಭೇಟಿಯಾಗಿದ್ದಾರೆ. ಮಹದಾಯಿ ನದಿಯ ಈ ಯೋಜನೆ ಪೂರ್ಣಗೊಳಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವವನ್ನು ಅಂತಿಮಗೊಳಿಸುವ ಮುನ್ನ ತಮಗೂ ಮಾಹಿತಿ ನೀಡಬೇಕು ಎಂದು ಅವರು ಕೋರಿದ್ದಾರೆ.
ಕರ್ನಾಟಕದ ಬಜೆಟ್ನಲ್ಲಿ ಯೋಜನೆಗೆ ₹500 ಕೋಟಿ ನಿಗದಿ ಮಾಡಲಾಗಿದೆ. ಅದರ ಮರುದಿನವೇ ಸಾವಂತ್ ಅವರು ಶೇಖಾವತ್ ಅವರನ್ನು ಭೇಟಿಯಾಗಿದ್ದಾರೆ.
ಮಹದಾಯಿ ಜಲ ವಿವಾದದ ಪರಿಹಾರ ನ್ಯಾಯಮಂಡಳಿಯು 2018ರಲ್ಲಿ ನೀಡಿದ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರವು ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಹಾಗಾಗಿ, ಮಹದಾಯಿ ನದಿಯಿಂದ ನೀರು ತಿರುಗಿಸುವ ಕಲಸಾ ಬಂಡೂರಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ಹಸಿರು ನಿಶಾನೆ ಸಿಕ್ಕಂತಾಗಿದೆ. ಆದರೆ, ಹೀಗೆ ನೀರು ತಿರುಗಿಸುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ಗೋವಾ ವಾದಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.