ADVERTISEMENT

ಮಹಾದೇವ್‌ ಆ್ಯಪ್‌: ₹ 580 ಕೋಟಿ ಮೌಲ್ಯದ ಅಡಮಾನಪತ್ರ ನಿಷ್ಕ್ರಿಯಗೊಳಿಸಿದ ಇ.ಡಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 12:58 IST
Last Updated 1 ಮಾರ್ಚ್ 2024, 12:58 IST
   

ನವದೆಹಲಿ: ಮಹಾದೇವ್‌ ಆ್ಯಪ್ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ದುಬೈ ಮೂಲದ ‘ಹವಾಲಾ ಆಪರೇಟರ್‌’ಗೆ ಸೇರಿದ ₹580 ಕೋಟಿಗೂ ಅಧಿಕ ಮೌಲ್ಯದ ಅಡಮಾನ ಪತ್ರಗಳನ್ನು ನಿಷ್ಕ್ರಿಯಗೊಳಿಸಿ, ನಗದು ಸೇರಿದಂತೆ ₹3.64 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ಪ್ರಕರಣ ಕುರಿತ ತನಿಖೆ ಭಾಗವಾಗಿ ಫೆ.28ರಂದು ಕೋಲ್ಕತ್ತ, ಗುರುಗ್ರಾಮ, ದೆಹಲಿ, ಇಂದೋರ್‌, ಮುಂಬೈ ಹಾಗೂ ರಾಯಪುರದ ವಿವಿಧ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ, ಈಗ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಮಹಾದೇವ್ ಆನ್‌ಲೈನ್‌ ಗೇಮಿಂಗ್‌ ಹಾಗೂ ಬೆಟ್ಟಿಂಗ್‌ ಆ್ಯಪ್‌ ನಂಟಿನ ಅಕ್ರಮಗಳಲ್ಲಿ ಛತ್ತೀಸಗಢದ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನಲಾದ ಅಂಶ ಇ.ಡಿ ನಡೆಸಿದ ತನಿಖೆಯಿಂದ ಗೊತ್ತಾಗಿತ್ತು.

ADVERTISEMENT

‘ಈ ಪ್ರಕರಣದಲ್ಲಿ ಹರಿಶಂಕರ್‌ ತಿಬ್ರೇವಾಲ್ ಎಂಬುವವರು ‘ಹವಾಲಾ ಆಪರೇಟರ್‌’ ಆಗಿದ್ದಾರೆ. ಕೋಲ್ಕತ್ತ ಮೂಲದ ಹರಿಶಂಕರ್‌ ಸದ್ಯ ದುಬೈ ನಿವಾಸಿ. ಮಹಾದೇವ್‌ ಆ್ಯಪ್ ಪ್ರವರ್ತಕರೊಂದಿಗೆ ಪಾಲುದಾರಿಕೆ ಹೊಂದಿದ್ದರು. ‘ಸ್ಕೈ ಎಕ್ಸ್‌ಚೇಂಜ್‌’ ಎಂಬ ಅಕ್ರಮ ಬೆಟ್ಟಿಂಗ್‌ ಆ್ಯಪ್‌ನ ಮಾಲೀಕತ್ವ ಹೊಂದಿದ್ದಲ್ಲದೇ, ಅದರ ಕಾರ್ಯಾಚರಣೆಯನ್ನೂ ನಡೆಸುತ್ತಿದ್ದ’ ಎಂದು ಇ.ಡಿ ತಿಳಿಸಿದೆ.

₹1.86 ಕೋಟಿ ನಗದು ಹಾಗೂ ₹1.78 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಈ ವರೆಗೆ ಜಾರಿ ನಿರ್ದೇಶನಾಲಯ 9 ಜನರನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.