ADVERTISEMENT

ಪರೀಕ್ಷೆಯಲ್ಲಿ ಮಕ್ಕಳು ನೆಪ ಹೇಳುವಂತೆ, ವಿಪಕ್ಷಗಳು ಇವಿಎಂನ್ನು ದೂರುತ್ತವೆ: ಮೋದಿ

ಪಿಟಿಐ
Published 24 ಏಪ್ರಿಲ್ 2019, 11:38 IST
Last Updated 24 ಏಪ್ರಿಲ್ 2019, 11:38 IST
   

ಲೊಹಾರ್‌ದಾಗಾ (ಜಾರ್ಖಂಡ್): ಇವಿಎಂ ದುರ್ಬಳಕೆಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಮೂರನೇ ಹಂತದ ಮತದಾನ ಮುಗಿದಾಗ ತಮಗಿನ್ನು ಅವಕಾಶವಿಲ್ಲ ಎಂದು ಮಹಾಮೈತ್ರಿಗೆ ಮನವರಿಕೆಯಾಗಿದೆ. ಹಾಗಾಗಿ ಅವರು ನೆಪ ಹುಡುಕುತ್ತಿದ್ದಾರೆ ಎಂದಿದ್ದಾರೆ.
ಬುಧವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಸೋಲನ್ನು ಒಪ್ಪಿಕೊಳ್ಳುವುದು ಬಿಟ್ಟರೆ ವಿಪಕ್ಷಗಳಿಗೆ ಬೇರೆ ದಾರಿ ಉಳಿದಿಲ್ಲ ಎಂದು ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ವಿಪಕ್ಷದ ಪ್ರಮುಖ ಪಕ್ಷಗಳು ವಿದ್ಯುನ್ಮಾನ ಮತಯಂತ್ರದ ವಿಶ್ವಾಸರ್ಹತೆ ಬಗ್ಗೆ ಪ್ರಶ್ನಿಸಿದ್ದು, ಮತಯಂತ್ರಗಳ ಪುನರ್‌ಪರಿಶೀಲನೆಗೆ ಒತ್ತಾಯಿಸಿದ್ದವು. ಇದಕ್ಕೆಪ್ರತಿಕ್ರಿಯಿಸಿದ ಪ್ರಧಾನಿ, ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳು ನೆಪ ಹೇಳುವಂತೆ, ಕಡಿಮೆ ಮತ ಚಲಾವಣೆ ಆಗಿರುವುದಕ್ಕೆ ಮತಯಂತ್ರವನ್ನು ದೂರುತ್ತಿವೆ ಎಂದಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಪಾಕಿಸ್ತಾನ ಭಾರತಕ್ಕೆ ಬೆದರಿಕೆಯೊಡ್ಡಿದಾಗ ಕಣ್ಣೀರು ಹಾಕಿದ್ದ ಕಾಂಗ್ರೆಸ್, ದೆಹಲಿಯಲ್ಲಿ ಅಧಿಕಾರಕ್ಕಾಗಿ ಕಣ್ಣಿಟ್ಟಿದೆ. ಗಡಿಭಾಗದಲ್ಲಿ ಹೋರಾಡಲು ಧೈರ್ಯ ಬೇಕು, ಹೊಟ್ಟೆಪಾಡಿಗಾಗಿ ಬಡವರು ಸೇನೆ ಸೇರುತ್ತಾರೆ ಎಂದು ಹೇಳುವವರು ನಾಶವಾಗುತ್ತಾರೆ.

ADVERTISEMENT

ಚೌಕೀದಾರ್ ಆಗುವುದು ಎಲ್ಲ ಭಾರತೀಯರ ಕರ್ತವ್ಯ ಎಂದ ಮೋದಿ,ತಾನು ಜಾತಿ ಅಥವಾ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿಲ್ಲ.ಇರಾಕ್‌ನಲ್ಲಿ 46 ನರ್ಸ್‌ಗಳು ಸೆರೆಯಾದಾಗ ಅವರನ್ನು ಬಂಧಮುಕ್ತಗೊಳಿಸಲು ನಾವು ಬಹಳಷ್ಟು ಶ್ರಮಪಟ್ಟೆವು.ಕೋಲ್ಕತ್ತದ ಜುಡಿತ್ ಡಿ ಸೋಜಾ ಅವರನ್ನು ಅಫ್ಘಾನಿಸ್ತಾನದಲ್ಲಿ ಅಪಹರಣ ಮಾಡಿದಾಗ ನಾವು ಆಕೆಯನ್ನು ಬಿಡುಗಡೆಗೊಳಿಸಿದೆವು. ಈ ಚೌಕೀದಾರ್ ದೇಶದ ಹೆಣ್ಣು ಮಕ್ಕಳ ಭದ್ರತೆ ಬಗ್ಗೆ ಸದಾ ಕಾಳಜಿ ಹೊಂದಿದ್ದಾನೆ ಎಂದಿದ್ದಾರೆ .

ಜಾರ್ಖಂಡ್‌ನ ಜನರಿಗೆ ಧನ್ಯವಾದ ಹೇಳಿದ ಪ್ರಧಾನಿ, ರಾಂಚಿಯಲ್ಲಿ ನನಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ.ನಾನು ಧನ್ಯನಾದೆ. ಅದೊಂದು ಪೂರ್ವ ಯೋಜಿತ ಕಾರ್ಯಕ್ರಮ ಆಗಿರಲಿಲ್ಲ. ಎರಡು ದಿನಗಳ ಹಿಂದೆ ಬಿಜೆಪಿ ರಾಜ್ಯ ಘಟಕ ಈ ಕಾರ್ಯಕ್ರಮಗದ ಬಗ್ಗೆ ಹೇಳಿದಾಗ ನಾನು ಖುಷಿಯಿಂದ ಒಪ್ಪಿಕೊಂಡೆ ಎಂದುಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.