ADVERTISEMENT

ಮಹಾರಾಷ್ಟ್ರ: ಮತ್ತೆ ಇ.ಡಿ ವಿಚಾರಣೆಯಿಂದ ತಪ್ಪಿಸಿಕೊಂಡ ಅನಿಲ್ ದೇಶಮುಖ್

ಡೆಕ್ಕನ್ ಹೆರಾಲ್ಡ್
Published 2 ಆಗಸ್ಟ್ 2021, 9:11 IST
Last Updated 2 ಆಗಸ್ಟ್ 2021, 9:11 IST
ಅನಿಲ್ ದೇಶಮುಖ್
ಅನಿಲ್ ದೇಶಮುಖ್   

ಮುಂಬೈ: ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಮತ್ತೆ ಗೈರಾಗಿದ್ದಾರೆ.

ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಮೂರು ಬಾರಿ ಸಮನ್ಸ್ ನೀಡಲಾಗಿತ್ತು. ಅವರ ಪುತ್ರ ಹಾಗೂ ಪತ್ನಿಗೂ ಸಮನ್ಸ್ ನೀಡಲಾಗಿತ್ತು. ಅವರೂ ವಿಚಾರಣೆಗೆ ಹಾಜರಾಗಿರಲಿಲ್ಲ.

₹100 ಕೋಟಿ ಲಂಚ ಪಡೆಯಲು ಮತ್ತು ಸುಲಿಗೆ ಮಾಡಲು ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದ್ದ ಆರೋಪಕ್ಕೆ ಸಂಬಂಧಿಸಿ ದೇಶಮುಖ್ ಅವರ ವಿರುದ್ಧ ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ಪ್ರಕರಣದಿಂದಾಗಿ ದೇಶಮುಖ್ ಅವರು ಏಪ್ರಿಲ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು.

ADVERTISEMENT

ದೇಶಮುಖ್ ಮತ್ತು ಅವರ ಆಪ್ತರ ಮುಂಬೈ, ನಾಗ್ಪುರ ನಿವಾಸಗ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದರು. ದೇಶಮುಖ್ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂಡೆ ಮತ್ತು ಸಹಾಯಕ ಕುಂದನ್ ಶಿಂದೆ ಅವರನ್ನು ಬಂಧಿಸಿದ್ದರು.

ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಮಾಡಿದ್ದ ಆರೋಪದ ಆಧಾರದಲ್ಲಿ ದೇಶಮುಖ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.