ಮುಂಬೈ(ಮಹಾರಾಷ್ಟ್ರ): ಕೊರೊನಾ ಹರಡದಂತೆ ಕಟ್ಟೆಚ್ಚರ ವಹಿಸಿ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದರೂ ಮುಂಬೈನಲ್ಲಿ ಮಾತ್ರ ಜನರಿಗೆ ಅರಿವಿಗೆ ಬಂದಿಲ್ಲದಂತೆ ಕಾಣುತ್ತಿದೆ.
ಇಲ್ಲಿನ ಬೈಕುಲಾ ತರಕಾರಿಮಾರುಕಟ್ಟೆಯ ಬಳಿ ಅಂತರ ಕಾಯ್ದುಕೊಳ್ಳದೆ ತರಕಾರಿ ಖರೀದಿಗಾಗಿ ಪಕ್ಕಪಕ್ಕದಲ್ಲಿಯೇ ಸಾಲು ಸಾಲಾಗಿ ನಿಂತಿದ್ದಾರೆ.ಪಕ್ಕದಲ್ಲಿಯೇ ಪೊಲೀಸರು ಭದ್ರತೆ ಕೈಗೊಂಡಿದ್ದರೂ ಅಂತರ ಕಾಯ್ದುಕೊಂಡಿಲ್ಲ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜನರಿಗೆ ಮಾತ್ರ ಇದನ್ನು ಲೆಕ್ಕಿಸದೆ ಪಕ್ಕದಲ್ಲಿಯೇ ನಿಂತಿರುವುದನ್ನು ಕಾಣಬಹುದು.
ಲಾಕ್ ಡೌನ್ ನಿಯಮ ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗಾಗಿ ಅವಕಾಶ ಮಾಡಿಕೊಟ್ಟಿದ್ದರಿಂದ ಜನರು ಗುಂಪುಗುಂಪಾಗಿ ಸೇರಿ ತರಕಾರಿ ಹಾಗೂ ಇತರೆ ಸಾಮಾನು ಖರೀದಿಸಲು ಮುಗಿಬೀಳುತ್ತಿದ್ದರು.ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ.
ಹಮಿದಿಯಾ ಮಸೀದಿ ಪ್ರದೇಶ ಸ್ತಬ್ಧ
ಮತ್ತೊಂದೆಡೆ ಮುಂಬೈನ ಹಮಿದಿಯಾ ಮಸೀದಿ ಪ್ರದೇಶ ಲಾಕ್ ಡೌನ್ ಕಾರಣ ಬಿಕೋ ಎನ್ನುತ್ತಿತ್ತು. ರಂಜಾನ್ ಉಪವಾಸ ಆಚರಣೆ ಇಲ್ಲಿ ಶನಿವಾರದಿಂದ ಆರಂಭವಾಗಿದೆ. ಸಾಮಾನ್ಯ ದಿನಗಳಲ್ಲಿರಂಜಾನ್ ಉಪವಾಸ ಆರಂಭವಾದರೆ ಪ್ರಾರ್ಥನೆ ಸಲ್ಲಿಸಲು ಬೆಳಿಗ್ಗೆ ಸೂರ್ಯೋದಯವಾಗುವ ಮುನ್ನ ಮಸೀದಿಯ ಆವರಣದಲ್ಲಿ ಜನರ ನೂಕು ನುಗ್ಗಲು ಇರುತ್ತಿತ್ತು.
ಲಾಕ್ ಡೌನ್ ಕಾರಣ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ. ಈ ಕಾರಣಕ್ಕಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಸರ್ಕಾರ ಸೂಚಿಸಿದ್ದರಿಂದಜನರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಈ ಕಾರಣದಿಂದ ರಂಜಾನ್ ಸಮಯದಲ್ಲಿ ಜನರಿಂದ ತುಂಬಿರುತ್ತಿದ್ದ ಈ ಪ್ರದೇಶ ಶನಿವಾರ ಬೆಳಿಗ್ಗೆ ಬಿಕೋ ಎನ್ನುತ್ತಿದೆ ಎಂದು ಎಎನ್ಐ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.