ಮುಂಬೈ:ಬಾಲಿವುಡ್ ನಟಿ ಕಂಗನಾ ರನೋಟ್ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಮತ್ತೊಮ್ಮೆ ಬೆದರಿಕೆ ಕರೆಗಳು ಬಂದಿವೆ ಎಂದು ಅವರ ಆಪ್ತ ಮೂಲಗಳು ಬುಧವಾರ ತಿಳಿಸಿವೆ.
ಅನಿಲ್ ದೇಶ್ಮುಖ್ ಅವರಿಗೆ ಮಂಗಳವಾರ ಹಿಮಾಚಲ ಪ್ರದೇಶ ಮತ್ತು ಬೇರೊಂದು ಸ್ಥಳದಿಂದ ವಿವಿಧ ಫೋನ್ ನಂಬರ್ಗಳಿಂದ ಬೆದರಿಕೆ ಕರೆಗಳು ಬಂದಿವೆ. ಆರೋಪಿಗಳು ಕಂಗನಾ ರನೋಟ್ ಅವರ ವಿವಾದದಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಅನಿಲ್ ಅವರಿಗೆ ಹಿಮಾಚಲ ಪ್ರದೇಶದಿಂದ ಮಂಗಳವಾರ ಬೆದರಿಕೆ ಕರೆಗಳು ಬಂದಿವೆ. ಅಲ್ಲದೇ ಬುಧವಾರ ಬೆಳಿಗ್ಗೆ 6 ಗಂಟೆಗೆ ಮತ್ತೆರಡು ಬೆದರಿಕೆ ಕರೆಗಳು ಬಂದಿವೆ.ಕರೆ ಮಾಡಿದವರಲ್ಲಿ ಒಬ್ಬ ತನ್ನನ್ನು ಮೃತ್ಯುಂಜಯ್ ಗಾರ್ಗ್ ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.
ಈ ಹಿಂದೆಯೂ ಸಚಿವ ಅನಿಲ್ ದೇಶಮುಖ್ ಕಚೇರಿಗೆ ಬೆದರಿಕೆ ಕರೆಗಳು ಬಂದ ಬಗ್ಗೆ ವರದಿಯಾಗಿತ್ತು.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, ಮೂವಿ ಮಾಫಿಯಾಗಿಂತ ನಾನು ಮುಂಬೈ ಪೊಲೀಸರನ್ನು ಕಂಡರೆ ಹೆದರುತ್ತೇನೆ. ನಾನು ಹಿಮಾಚಲ ಪ್ರದೇಶ ಅಥವಾ ಕೇಂದ್ರದಿಂದ ಭದ್ರತೆ ಪಡೆಯಲು ಬಯಸುತ್ತೇನೆ ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಇದು ಸಾಕಷ್ಟು ವಿವಾದವನ್ನುಂಟು ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ದೇಶ್ಮುಖ್, ಮಹಾರಾಷ್ಟ್ರ ಮತ್ತು ಮುಂಬೈ ಪೊಲೀಸ್ ಸುರಕ್ಷಿತವಲ್ಲ ಎಂದು ಹೇಳಿದ್ದವರು ಇಲ್ಲಿ ವಾಸಿಸಲು ಅರ್ಹರಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಅಲ್ಲದೇ ನಟ ಶೇಖರ್ ಸುಮನ್ ಪುತ್ರಅಧ್ಯಯನ್, ಕಂಗನಾ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಟಿ.ವಿ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು.
ಈ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಅನಿಲ್ ದೇಶ್ಮುಖ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಬೆದರಿಕೆ ಕರೆಗಳು ಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.