ಮುಂಬೈ: ಲಸಿಕೆ ಕೊರತೆಯಿಂದಾಗಿ ರಾಜ್ಯದಲ್ಲಿ ಕೋವಿಡ್-19 ಲಸಿಕೆ ಅಭಿಯಾನವು ಅರ್ಧಕ್ಕೆ ನಿಲ್ಲಲು ಬಿಡಬಾರದು ಎಂದು ಮಹಾರಾಷ್ಟ್ರದ ಸಚಿವ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ನಾಯಕ ನವಾಬ್ ಮಲಿಕ್ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಿರುವ ಡಾ. ಭಾರತಿಪ್ರವೀಣ್ ಪವಾರ್, ವಿರೋಧ ಪಕ್ಷಗಳು ಲಸಿಕೆ ಅಭಿಯಾನದಲ್ಲಿ ರಾಜಕೀಯ ಮಾಡಬಾರದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದರು. ಪ್ರವೀಣ್ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನವಾಬ್, ʼಲಸಿಕೆ ವಿಚಾರದಲ್ಲಿ ರಾಜಕೀಯ ಇರಬಾರದು ಎಂದು ಆರೋಗ್ಯ ಇಲಾಖೆಯ ರಾಜ್ಯ ಖಾತೆ ಸಚಿವ ಭಾರತಿ ಪ್ರವೀಣ್ಹೇಳುತ್ತಾರೆ. ಕೇಂದ್ರ ಸರ್ಕಾರವು ದೊಡ್ಡ ಪ್ರಮಾಣದ ಅಂಕಿ ಅಂಶಗಳನ್ನು (ಲಸಿಕೆ ಪೂರೈಕೆಗೆ ಸಂಬಂಧ) ತೆರೆದಿಡುತ್ತದೆ. ಆದರೆ, ಲಸಿಕೆಯು ರಾಜ್ಯವನ್ನು ತಲುಪುತ್ತಿಲ್ಲ. ಮುಂಬೈನಲ್ಲಿದ್ದ ಸಾಕಷ್ಟು ಲಸಿಕೆ ವಿತರಣಾ ಕೇಂದ್ರಗಳನ್ನು ಮುಚ್ಚಲಾಗಿದೆʼ ಎಂದು ಹೇಳಿದ್ದಾರೆ.
ಮುಂದುವರಿದು, ʼಯೋಜನೆಯ ನಕ್ಷೆ ತಯಾರಿಸಿಕೊಳ್ಳುವಂತೆ ನಾನು ವಿನಂತಿಸುತ್ತೇನೆ. ಕೋವಿಡ್-19 ಲಸಿಕೆ ಅಭಿಯಾನವು ನಿಲ್ಲಬಾರದುʼ ಎಂದಿದ್ದಾರೆ.
ಕೇಂದ್ರದಿಂದ ತಿಂಗಳಿಗೆ ಕನಿಷ್ಠ ಮೂರು ಕೋಟಿಡೋಸ್ನಷ್ಟುಕೋವಿಡ್-19 ಲಸಿಕೆ ಕೋರುವ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆಯು ಮಂಗಳವಾರ (ಜುಲೈ6) ಅಂಗೀಕರಿಸಿತ್ತು. ಅದರಂತೆ ಪ್ರತಿದಿನ ಕನಿಷ್ಠ10 ಲಕ್ಷದಿಂದ ಗರಿಷ್ಠ15ಲಕ್ಷ ಡೋಸ್ನಷ್ಟು ಲಸಿಕೆ ವಿತರಿಸಲು ಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.