ಮುಂಬೈ:ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು, ಧಾರಾಕಾರವಾಗಿ ಸುರಿಯುತ್ತಿದೆ. ಭಾರೀ ಮಳೆಗೆ ನದಿಗಳು ಮೈದುಂಬಿವೆ. ವಸತಿ ಪ್ರದೇಶಗಳು ಜಲಾವೃತವಾಗಿವೆ. ರೈಲು ಹಾಗೂ ವಿಮಾನ ಸಂಚಾರದಲ್ಲೂ ವ್ಯತ್ಯಯವಾಗಿದೆ.
ಮಳೆಯಿಂದಾಗಿ ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ.
ಹಿಂದಿನ 24 ಗಂಟೆಗಳಲ್ಲಿ 150ರಿಂದ 180 ಮಿ.ಮೀ. ಮಳೆ ಬಿದ್ದಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಬೀಳಲಿದೆಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ನಿರಂತರ ಮಳೆಯಿಂದಾಗಿ ಮುಂಬೈನ ಚಂಬೂರು ಪ್ರದೇಶ ಜಲಾವೃತವಾಗಿದೆ.
ಭಾರೀ ಮಳೆಗೆ ಮುಂಬೈನ ರಸ್ತೆಯಲ್ಲಿ ನೀರು ತುಂಬಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.
ಮಳೆಗೆ ನದಿ ಮೈದುಂಬಿ ಹರಿಯುತ್ತಿದ್ದು, ಕಲ್ಯಾಣ ಪ್ರದೇಶ ಜಲಾವೃತಗೊಂಡಿದೆ.
ಮುಂಬೈನ ಗಾಂಧಿ ಮಾರುಕಟ್ಟೆ ಜಲಾವೃತವಾಗಿದೆ.
ರೈಲು, ವಿಮಾನ ಸಂಚಾರದಲ್ಲೂ ವ್ಯತ್ಯಯ
ಭಾರಿ ಮಳೆಗೆ ರೈಲು ಹಳಿಗಳ ಮೇಲೆ ನೀರು ನಿಂತಿರುವ ಕಾರಣ ಹಲವುರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಜತೆಗೆ, ಹಲವು ವಿಮಾನಗಳ ಸಂಚಾರದಲ್ಲೂ ಸಮಯ ಬದಲಾವಣೆ ಮಾಡಲಾಗಿದೆ.
ಮಳೆಯ ಕಾರಣ 7 ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮುಂಬೈಗೆ ಬರಬೇಕಿದ್ದ ವಿಮಾನಗಳ ಮಾರ್ಗ ಬದಲಿಸಲಾಗಿದೆ. ನಂತರ, ಎಂದಿನಂತೆ ವಿಮಾನ ಸಂಚಾರ ನಡೆಯುತ್ತಿದೆ ಎಂದು ಮುಂಬೈ ಅಂತರ ರಾಷ್ಟ್ರೀಯ ವಿಮಾನನಿಲ್ದಾಣದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ರೈಲು ಹಳಿ ಜಲಾವೃತವಾಗಿರುವ ಕಾರಣಬಾದಲ್ಪುರ–ವಂಗಾನಿ ಮಧ್ಯೆ 2 ಸಾವಿರ ಪ್ರಯಾಣಿಕರಿದ್ದ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ನಿಂತಿದೆ. ರೈಲು ನಿಂತ ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆಗೆ ಎನ್ಡಿಆರ್ಎಫ್ ತಂಡ ತೆರಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.