ADVERTISEMENT

ಮುಂಬೈ| ಬೈಕ್‌ ಸವಾರರಿಂದ ಎನ್‌ಸಿಪಿ ಕಾರ್ಯಕರ್ತೆಯ ಹತ್ಯೆ

ಪಿಟಿಐ
Published 1 ಡಿಸೆಂಬರ್ 2020, 5:42 IST
Last Updated 1 ಡಿಸೆಂಬರ್ 2020, 5:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಎನ್‌ಸಿಪಿ ಕಾರ್ಯಕರ್ತೆಯೊಬ್ಬರನ್ನು ಬೈಕ್‌ ಸವಾರರಿಬ್ಬರು ಗಂಟಲು ಕತ್ತರಿಸಿ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಸೋಮವಾರ ರಾತ್ರಿ 8.20ರ ಸುಮಾರಿಗೆ ರೇಖಾ ಬಾಹುಸಾಹೇಬ್‌ ಜಾರೆ ಅವರುತನ್ನ ತಾಯಿ, ಮಗ ಮತ್ತು ಸ್ನೇಹಿತೆಯೊಂದಿಗೆ ಪುಣೆಯಿಂದ ಅಹ್ಮದ್‌ನಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು.

ಆರೋಪಿಗಳು ಪಾರ್ನರ್‌ನ ಜಟಗಾಂವ್ ಘಾಟ್‌ನಲ್ಲಿ ರೇಖಾ ಅವರ ಕಾರನ್ನು ತಡೆದರು. ಅಲ್ಲಿ ಆರೋಪಿಗಳು ಮತ್ತು ರೇಖಾ ಅವರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿಯೊಬ್ಬ ರೇಖಾ ಅವರ ಮೇಲೆಚಾಕುವಿನಿಂದ ಹಲ್ಲೆ ನಡೆಸಿದ್ದು, ಗಂಟಲು ಕತ್ತರಿಸಿ ಕೊಂದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದರು ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಅಹ್ಮದ್‌ನಗರ ಸುಪಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಈ ಹತ್ಯೆ ಹಿಂದಿರುವ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ರೇಖಾ ಬಾಹುಸಾಹೇಬ್‌ ಜಾರೆ ಅವರು ಯಶಸ್ವಿನಿ ಮಹಿಳಾ ಬ್ರಿಗೇಡ್ ಎಂಬ ಮಹಿಳಾ ಸಂಘಟನೆಯ ಅಧ್ಯಕ್ಷರೂ ಆಗಿದ್ದರು. ಈ ಸ್ಥಳೀಯ ಸಂಸ್ಥೆ ಮಹಿಳಾ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.