ADVERTISEMENT

ಚಿರತೆ ದಾಳಿಯಿಂದ 5 ವರ್ಷದ ಮಗುವನ್ನು ಪಾರು ಮಾಡಿದ ತಾಯಿ

ಪಿಟಿಐ
Published 18 ಜುಲೈ 2021, 8:26 IST
Last Updated 18 ಜುಲೈ 2021, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಕಾಡಿನಲ್ಲಿ ಚಿರತೆ ದಾಳಿಯಿಂದ ಐದು ವರ್ಷದ ಮಗುವನ್ನುತಾಯಿ ಪಾರು ಮಾಡಿರುವ ಘಟನೆ ವರದಿಯಾಗಿದೆ.

ಮಗುವಿನ ರಕ್ಷಣೆಗಾಗಿ ತಾಯಿ ಎಂಥದ್ದೇ ಪರಿಸ್ಥಿತಿಯಲ್ಲೂ ತನ್ನ ಪ್ರಾಣ ಪಣಕ್ಕಿಟ್ಟಾದರೂ ಹೋರಾಡುತ್ತಾಳೆ ಎಂಬುದಕ್ಕೆ ಇದೊಂದು ನಿದರ್ಶನದಂತಿದೆ.

ಗಂಭೀರ ಗಾಯಗೊಂಡಿರುವಮಗುವನ್ನು ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ.

ADVERTISEMENT

ಜೂನ್ 30ರಂದು ಘಟನೆ ನಡೆದಿದೆ. 15 ಕಿ.ಮೀ. ದೂರದಲ್ಲಿರುವ ಜುನೊನಾ ಗ್ರಾಮದ ನಿವಾಸಿ ಅರ್ಚನಾ ಮೆಶ್ರಮ್, ಐದು ವರ್ಷದ ಹೆಣ್ಣು ಮಗುವಿನ ಜೊತೆ ಹಳ್ಳಿಯ ಹೊರವಲಯದ ಕಾಡಿನಲ್ಲಿ ಸಾಗುತ್ತಿದ್ದರು. ಈ ವೇಳೆ ತಾಯಿಯ ಹಿಂದಿದ್ದ ಮಗುವಿನಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ ಎಂದು ಅರಣ್ಯ ಅಭಿವೃದ್ಧಿ ಕಾರ್ಪೋರೇಷನ್ ಲಿಮಿಟೆಡ್‌ನ ವಿಭಾಗೀಯ ವ್ಯವಸ್ಥಾಪಕ ವಿ.ಎಂ. ಮೊರೆ ತಿಳಿಸಿದ್ದಾರೆ.

ಭಯಗೊಂಡ ಮಹಿಳೆ ಆರಂಭದಲ್ಲಿ ಹಿಂದಕ್ಕೆ ಸರಿದರು. ಆದರೆ ಧೈರ್ಯ ಮಾಡಿಕೊಂಡು, ಬಿದಿರಿನ ಕೋಲಿನಿಂದ ಚಿರತೆಗೆ ಹೊಡೆಯಲಾರಂಭಿಸಿದಳು. ಈ ವೇಳೆ ಚಿರತೆಯು ಮಹಿಳೆಯ ಮೇಲೆ ದಾಳಿಗೆ ಯತ್ನಿಸಿತ್ತು. ಆದರೆ ಛಲ ಬಿಡದ ತಾಯಿ ಹೋರಾಟವನ್ನು ಮುಂದುವರಿಸಿದರು. ಕೊನೆಗೆ ಚಿರತೆ ಕಾಡಿನತ್ತ ಓಡಿ ಹೋಯಿತು.

ಮಗುವಿನ ದವಡೆಗೆ ಗಂಭೀರ ಗಾಯವಾಗಿದ್ದು, ಸಿಬ್ಬಂದಿ ಆಕೆಯನ್ನು ಚಂದ್ರಾಪುರ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರದ ಸರ್ಕಾರಿ ದಂತ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಮಗುವಿನ ಚಿಕಿತ್ಸೆಗಾಗಿ ಅರಣ್ಯ ಇಲಾಖೆಯು ಧನ ಸಹಾಯವನ್ನು ನೀಡಿದೆ. ಸೋಮವಾರದಂದು ಶಸ್ತ್ರಚಿಕಿತ್ಸೆನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.