ನಾಂದೇಡ್: ಅಖಿಲ ಭಾರತ ಕಾಂಗ್ರೆಸ್ ಸೇವಾ ದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಪಾಂಡೆ ಮಂಗಳವಾರ ನಡೆಯುತ್ತಿದ್ದ ಕಾಂಗ್ರೆಸ್ ಜೋಡೋ ಯಾತ್ರೆಯ ವೇಳೆಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಕ್ಷದಲ್ಲಿ ‘ಪಾಂಡೆ’ ಎಂದೇ ಚಿರಪರಿಚಿತರಾಗಿದ್ದ ಕೃಷ್ಣ ಕುಮಾರ್, ತ್ರಿವರ್ಣ ಧ್ವಜವನ್ನು ಹಿಡಿದಿದ್ದರು ಮತ್ತು ಯಾತ್ರೆಯಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಇತರ ಮುಖಂಡರ ಜೊತೆ ನಡೆದುಕೊಂಡು ಹೋಗುತ್ತಿದ್ದರು. ಎದೆನೋವು ಕಾಣಿಸಿಕೊಂಡಿದ್ದು, ಕೈಯ್ಯಲಿದ್ದ ಧ್ವಜವನ್ನು ಪಕ್ಕದಲ್ಲಿದ್ದವರಿಗೆ ನೀಡಿ ಕುಸಿದುಬಿದ್ದಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ತಕ್ಷಣ ಅಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಪಾಂಡೆ ನಿಧನರಾಗಿರುವುದನ್ನು ವೈದ್ಯರು ಖಚಿತಪಡಿಸಿದರು ಎಂದು ಅವರು ತಿಳಿಸಿದ್ದಾರೆ.
62 ದಿನಗಳಿಂದ ನಡೆಯುತ್ತಿರುವ ಯಾತ್ರೆ ಇಂದು ಮಹಾರಾಷ್ಟ್ರ ಪ್ರವೇಶಿಸಿತ್ತು. ಪಾಂಡೆ ಪುತ್ರನನ್ನು ಯಾತ್ರೆಗೆ ಕರೆಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಇತರರು ಮೃತರಿಗೆ ಸಂತಾಪ ಸೂಚಿಸಿದರು.
‘ಪಾಂಡೆ ನಿಧನ ಕಾಂಗ್ರೆಸ್ ಕುಟುಂಬಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಬದುಕಿನ ಕೊನೆಯ ಕ್ಷಣದಲ್ಲಿ ಅವರು ತ್ರಿವರ್ಣ ಧ್ವಜ ಹಿಡಿದಿದ್ದರು. ದೇಶಕ್ಕೆ ಅವರ ಸೇವೆ ನಮಗೆ ಸ್ಫೂರ್ತಿ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪಾಂಡೆ ಅವರ ಹುಟ್ಟೂರು ನಾಗ್ಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ದುರ್ಘಟನೆಯಿಂದಾಗಿ ಜೋಡೋಯಾತ್ರೆ ಮೌನಮೆರವಣಿಗೆಯಾಗಿ ಮುಂದುವರಿಯಿತು. ಸಂಜೆ ಪಾಂಡೆ ಭೋಪಾಲ ಹಳ್ಳಿಯಲ್ಲಿ ಸಂತಾಪ ಸಭೆ ನಡೆಯಲಿದೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.