ಮುಂಬೈ: ‘ನನ್ನ ಮಗಳ ಮೇಲೆ ಅತ್ಯಾಚಾರ ನಡೆಸಲಾಗಿದೆ’ ಎಂದು ಆರೋಪಿಸಿರುವ 21 ವರ್ಷದ ಬುಡಕಟ್ಟು ಮಹಿಳೆಯೊಬ್ಬರ ತಂದೆ, ಮಗಳ ಮೃತದೇಹವನ್ನು ಕಳೆದ 44 ದಿನಗಳಿಂದ ಉಪ್ಪು ತುಂಬಿದ ಗುಂಡಿಯೊಳಗೆ ಸಂರಕ್ಷಿಸಿ ಇಟ್ಟಿರುವ ಘಟನೆ ಮಹಾರಾಷ್ಟ್ರದ ನಂದುರಬಾರ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯ ಮೃತದೇಹವನ್ನು ಗುರುವಾರ ಮುಂಬೈನ ಜೆ.ಜೆ ಆಸ್ಪತ್ರೆಗೆ ತಂದಿರುವ ತಂದೆ, ಮಗಳ ಸಾವಿನ ‘ಸತ್ಯ’ ತಿಳಿಯುವುದಕ್ಕಾಗಿ ಎರಡನೇ ಬಾರಿಗೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಬೇಕು ಎಂದು ಆಗ್ರಹಿಸಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು.
ಘಟನೆ ಏನು?: ಆಗಸ್ಟ್ 1ರಂದು ಮಹಿಳೆಯ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ನಂದುರಬಾರ್ಜಿಲ್ಲೆಯ ದಢಂಗಾವ್ ತಾಲ್ಲೂಕಿನ ವಾವಿ ಪ್ರದೇಶದಲ್ಲಿ ದೊರೆತಿತ್ತು. ‘ನನ್ನ ಮಗಳ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ’ ಎಂದು ಆ ದಿನವೇ ಮಹಿಳೆಯ ತಂದೆ ಆರೋಪಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
‘ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು. ಪ್ರಕರಣ ಸಂಬಂಧ ಮೂವರನ್ನೂ ಬಂಧಿಸಲಾಗಿತ್ತು. ನಂತರ ನಂದುರಬಾರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವರದಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರವಾಗಿಲ್ಲ ಎಂದು ಹೇಳಲಾಗಿತ್ತು. ಆದ್ದರಿಂದ, ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ಒಪ್ಪದ ಮಹಿಳೆಯ ಕುಟುಂಬದವರು ‘ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ’ ಎಂದು ದೂರಿ, ಮಹಿಳೆಯ ಶವವನ್ನು ಉಪ್ಪಿನ ಗುಂಡಿಯಲ್ಲಿ ಸಂರಕ್ಷಿಸಿ ಇಟ್ಟಿದ್ದರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.