’ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
.... ದಾರವ ಜಗ್ಗಿ ದೂರದಿ ಬಗ್ಗಿ; ತಾರೆಯ ನಗಿಸುವ ನನ್ನ ಪಟ...’ ಶಾಲೆಯ ಪಠ್ಯದಲ್ಲಿನ ಈ ಪದ್ಯ ಆಗಸದಲ್ಲಿ ಪಟಗಳನ್ನು ಕಂಡ ಕ್ಷಣವೇ ತಲೆಯಲ್ಲಿ ಗುನುಗಲು ಶುರುವಾಗುತ್ತದೆ. ಸುಗ್ಗಿ ಹಬ್ಬ ಸಂಕ್ರಾಂತಿಯ ಸಮಯದಲ್ಲಿ ಎಳ್ಳು ಬೆಲ್ಲ, ಕಬ್ಬಿನ ಜಲ್ಲೆಯ ಜತೆಗೆ ಬಣ್ಣದ ಗಾಳಿಪಟಗಳೂ ಮನಸೆಳೆಯುತ್ತವೆ. ಅಂಗಡಿ ಬೀದಿಯಲ್ಲಿ ಒಂದು ಸುತ್ತು ಬಂದರೆ, ಚಿತ್ರ–ವಿಚಿತ್ರದ, ಉದ್ದ–ಗಿಡ್ಡು ಬಾಲದ ಗಾಳಿಪಟಗಳು ಕಣ್ಣಿಗೆ ರಾಚುತ್ತವೆ. ಸ್ಟಾರ್ ನಟನಾಗಲಿ, ಬ್ಯುಸಿ ಜನನಾಯಕನಾಗಲೀ ಗಾಳಿಪಟದ ದಾರವನ್ನು ಜಗ್ಗಲು ಶುರುವಿಟ್ಟರೇ ಮಗುವಿನಂತೆ ಅನಂತದಲ್ಲಿ ಮೈಮರೆಯುತ್ತಾರೆ.
ಸೋಮವಾರ ದೇಶದ ಹಲವು ಭಾಗಗಳಲ್ಲಿ ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಕ್ರಾಂತಿ ಸಂಭ್ರಮವನ್ನು ತುಂಬಿಕೊಂಡಿದ್ದಾರೆ.
ಪುಟಾಣಿ ಮಗಳ ಕೈನಲ್ಲಿ ನೂಲಿನ ಉಂಡೆ, ಪಟದ ಸೂತ್ರ ಹಿಡಿದಿರುವ ತಂದೆ. ಮೇಲೆ ಮೇಲೆ ಹಾರಿಸಲು ಇಬ್ಬರ ಸಾಹಸ...– ನಟ ಅಕ್ಷಯ್ ಕುಮಾರ್ ಮಗಳೊಂದಿಗೆ ಗಾಳಿಪಟ ಹಾರಿಸುವ ವಿಡಿಯೊ ಅನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅಹಮದಾಬಾದ್ನಲ್ಲಿ ಕಟ್ಟಡವೊಂದ ಮಹಡಿಯಲ್ಲಿ ನಿಂತು ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಗಾಳಿಪಟ ಹಾರಿಸಿದರು.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತನ್ನ ನಿವಾಸದ ಹೊರಗೆ ಪಟ ಹಾರಿಬಿಟ್ಟಿದ್ದಾರೆ.
ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಸಮುದ್ರ ತೀರದಲ್ಲಿ ಮರಳಿನ ಮೇಲೆ ಗಾಳಿಪಟಗಳನ್ನು ಮೂಡಿಸಿ, ಭಿನ್ನವಾಗಿ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.