ADVERTISEMENT

ಮಾಲೆಗಾಂವ್ ಸ್ಫೋಟ: ಪ್ರಜ್ಞಾ ಠಾಕೂರ್‌ಗೆ ಎನ್‌ಐಎ ವಿಶೇಷ ಕೋರ್ಟ್‌ ವಾರಂಟ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 14:26 IST
Last Updated 11 ಮಾರ್ಚ್ 2024, 14:26 IST
ಪ್ರಜ್ಞಾ ಸಿಂಗ್‌ ಠಾಕೂರ್‌
ಪ್ರಜ್ಞಾ ಸಿಂಗ್‌ ಠಾಕೂರ್‌   

ಮುಂಬೈ: ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರಿಗೆ ಎನ್‌ಐಎ ವಿಶೇಷ ಕೋರ್ಟ್‌ ಸೋಮವಾರ ಜಾಮೀನು ಪಡೆಯಬಹುದಾದ ವಾರಂಟ್ ಜಾರಿಗೊಳಿಸಿದೆ. 

2008ರಲ್ಲಿ ನಡೆದಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ಎಚ್ಚರಿಕೆ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಈ ವಾರಂಟ್ ಜಾರಿಗೊಳಿಸಲಾಗಿದೆ. 

ಯುಎಪಿಎ ಅಡಿಯಲ್ಲಿ ಪ್ರಜ್ಞಾ ಠಾಕೂರ್‌ ಹಾಗೂ ಇತರೆ ಆರು ಮಂದಿ ಸ್ಫೋಟ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಎನ್‌ಐಎ ನ್ಯಾಯಾಲಯವು ಈಗ ಆರೋಪಿಗಳ ಹೇಳಿಕೆಗಳನ್ನು ಅಪರಾಧ ಪ್ರಕ್ರಿಯಾ ಸಂಹಿತೆಯಡಿ (ಸಿಆರ್‌ಪಿಸಿ) ದಾಖಲಿಸಿಕೊಳ್ಳುತ್ತಿದೆ. 

ADVERTISEMENT

ವಿಶೇಷ ನ್ಯಾಯಮೂರ್ತಿ ಎ.ಕೆ. ಲಾಹೋಟಿ ಅವರು ಠಾಕೂರ್ ಅವರಿಗೆ ₹10 ಸಾವಿರ ಮೊತ್ತದೊಂದಿಗೆ ವಾರಂಟ್‌ ಜಾರಿಗೊಳಿಸಿದ್ದೇ ಅಲ್ಲದೆ, ಮಾರ್ಚ್ 20ರ ಹೊತ್ತಿಗೆ ವಿಚಾರಣೆಯ ಕುರಿತ ವರದಿಯನ್ನು ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿತು. 

ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದರೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಕಳೆದ ತಿಂಗಳೇ ಪ್ರಜ್ಞಾ ಠಾಕೂರ್ ಅವರಿಗೆ ಕೋರ್ಟ್ ಎಚ್ಚರಿಕೆ ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.