ಜೈಪುರ: ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಗೆ ಸಂಬಂಧಿಸಿ ದೆಹಲಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗದಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಸೋಮವಾರ ಇಲ್ಲಿ ನಡೆದ ‘ಸಂವಿಧಾನ ಉಳಿಸಿ’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ‘ದೇಶದ ಪ್ರತಿಷ್ಠೆಗೆ ಧಕ್ಕೆಯಾದಾಗ ನೀವು (ಪ್ರಧಾನಿ ಮೋದಿ) ಬಿಹಾರದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದೀರಿ. ಇದು ದೇಶದ ದುರ್ದೈವ’ ಎಂದು ದೂರಿದರು.
‘ಸಭೆಯಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು. ಆದರೆ, ಪ್ರಧಾನಿ ಅವರೇ ಗೈರಾಗಿದ್ದರು. ಬಿಹಾರವು ದೆಹಲಿಯಿಂದ ಬಹಳ ದೂರದಲ್ಲಿತ್ತೇ? ಪ್ರಧಾನಿ ಅವರು ಸಭೆಗೆ ಹಾಜರಾಗಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ವಿವರಣೆ ನೀಡಬೇಕಿತ್ತು. ನಮ್ಮಿಂದ ಏನು ಸಹಕಾರ ಬೇಕು ಎಂಬುದನ್ನು ತಿಳಿಸಬೇಕಿತ್ತು’ ಎಂದರು.
‘ದೇಶದ ಹಿತಾಸಕ್ತಿಯ ವಿಚಾರದಲ್ಲಿ ಕೇಂದ್ರ ಸರ್ಕಾರವು ಯಾವುದೇ ನಿರ್ಧಾರ ಕೈಗೊಂಡರೂ ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ. ಏಕೆಂದರೆ, ಪಕ್ಷಗಳು ಅಥವಾ ಧರ್ಮಗಳಿಗಿಂತ ದೇಶವೇ ಪರಮೋಚ್ಛ. ದೇಶಕ್ಕಾಗಿ ಎಲ್ಲರೂ ಒಟ್ಟಾಗಬೇಕು’ ಎಂದರು.
ಕಾಂಗ್ರೆಸ್ ಪಕ್ಷವು ಒಗ್ಗಟ್ಟಿನ ಮಾತನಾಡುತ್ತದೆ. ಆದರೆ, ಬಿಜೆಪಿ ಒಗ್ಗಟ್ಟು ಮುರಿಯುವ ಮಾತನಾಡುತ್ತದೆ.ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.