ADVERTISEMENT

ಉತ್ತರ ಪ್ರದೇಶದಲ್ಲೂ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ: ಮಮತಾ ಬ್ಯಾನರ್ಜಿ

ಐಎಎನ್ಎಸ್
Published 8 ಫೆಬ್ರುವರಿ 2022, 11:03 IST
Last Updated 8 ಫೆಬ್ರುವರಿ 2022, 11:03 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಲಖನೌನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು – ಐಎಎನ್‌ಎಸ್ ಚಿತ್ರ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಲಖನೌನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು – ಐಎಎನ್‌ಎಸ್ ಚಿತ್ರ   

ಲಖನೌ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಹತ್ರಾಸ್ ಹಾಗೂ ಉನ್ನಾವೊದಲ್ಲಿ ನಡೆದಿರುವ ಘಟನೆಗಳಿಗೆ ಹಾಗೂ ಕೋವಿಡ್ ಸಾವುಗಳಿಗಾಗಿ ಕೇಸರಿ ಪಕ್ಷವು ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ನಾವು ಬಿಜೆಪಿಯನ್ನು ಉಚ್ಚಾಟಿಸಿದ್ದೇವೆ. ಉತ್ತರ ಪ್ರದೇಶದಿಂದಲೂ ಕಿತ್ತೊಗೆಯಲಿದ್ದೇವೆ ಎಂದು ಹೇಳಿದ್ದಾರೆ.

‘ಗಂಗಾ ನದಿಯನ್ನು ನಾವು ಪೂಜಿಸುತ್ತೇವೆ. ಆದರೆ ಗಂಗಾ ನದಿಯಲ್ಲಿ ಶವಗಳು ತೇಲಿಹೋಗುತ್ತಿದ್ದಾಗ ಯೋಗಿ ಜೀ ಎಲ್ಲಿದ್ದರು? ನೀವು (ಯೋಗಿ ಆದಿತ್ಯನಾಥ್ ಅವರನ್ನು ಉದ್ದೇಶಿಸಿ) ಪಶ್ಚಿಮ ಬಂಗಾಳದಲ್ಲಿ ನನ್ನನ್ನು ಸೋಲಿಸುವುದಕ್ಕಾಗಿ ಬಂದಿರಿ, ಆದರೆ ಜನರ ಬಗ್ಗೆ ಕಾಳಜಿ ವಹಿಸಲಿಲ್ಲ. ಅಂತ್ಯಸಂಸ್ಕಾರ ನಡೆಸುವುದಕ್ಕೆ ನಿಮ್ಮಲ್ಲಿ ಕಟ್ಟಿಗೆ ಇರಲಿಲ್ಲವೇ? ಮೊದಲು ಕ್ಷಮೆ ಕೇಳಿ, ನಂತರ ಮತ ಯಾಚಿಸುವಿರಂತೆ’ ಎಂದು ಮಮತಾ ಹೇಳಿದ್ದಾರೆ.

ADVERTISEMENT

ಉಚಿತವಾಗಿ ಲಸಿಕೆ ನೀಡಿದ್ದೇವೆ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರ ಸ್ವಂತ ಹಣದಿಂದ ಲಸಿಕೆ ನೀಡಿದ್ದಾರೆಯೇ? ಯಾರ ಹಣ ಅದು? ಅದು ಜನರ ದುಡ್ಡು ಎಂದು ಮಮತಾ ಹೇಳಿದ್ದಾರೆ.

‘ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸುಳ್ಳುಗಳಿಗೆ ನಾವು ಆಸ್ಪದ ನೀಡುವುದಿಲ್ಲ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗೆಲ್ಲಲಿದ್ದಾರೆ’ ಎಂದು ಮಮತಾ ಹೇಳಿದ್ದಾರೆ.

ಸಮಾಜವಾದಿ ಪಕ್ಷವನ್ನು ಬೆಂಬಲಿಸಬೇಕು ಎಂದೂ ಬಿಜೆಪಿಯನ್ನು ಸೋಲಿಸಬೇಕು ಎಂದೂ ಮತದಾರರಿಗೆ ಮಮತಾ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.