ಕೋಲ್ಕತ್ತ: ಬಿಜೆಪಿಯು ಜಗತ್ತಿನಲ್ಲಿಯೇ ಅತಿ ದೊಡ್ಡ ಸುಲಿಗೆಕೋರಪಕ್ಷವಾಗಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಖೆಜುರಿ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅವರು, 'ಸಾಮಾನ್ಯ ಮನುಷ್ಯನೊಬ್ಬ ಕೇವಲ ₹ 500 ಅನ್ನು ಕದ್ದರೆ, ಅವನನ್ನು ಸುಲುಗೆಕೋರನೆಂದು ಕರೆಯಲಾಗುತ್ತಿದೆ. ಆದರೆ, ಬಿಜೆಪಿಯು ಸಾಮಾನ್ಯ ಜನರಿಂದ ಹಲವು ಲಕ್ಷ ಕೋಟಿ ರೂಪಾಯಿ ಹಣವನ್ನು ದೋಚುತ್ತಿದೆ. ಬಿಜೆಪಿಯು ಜಗತ್ತಿನಲ್ಲಿಯೇ ಅತಿ ದೊಡ್ಡ ಸುಲಿಗೆಕೋರಪಕ್ಷವಾಗಿದೆ' ಎಂದು ಹರಿಹಾಯ್ದಿದ್ದಾರೆ.
'ಪಿಎಂ ಕೇರ್ ಫಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಆದರೆ, ಜನರಿಗೆ ಸರಿಯಾಗಿ ಕೋವಿಡ್ ಲಸಿಕೆಗಳು ಸಿಗುತ್ತಿಲ್ಲ. ಕೊರೊನಾ ವೈರಸ್ ಸೋಂಕು ಮತ್ತೆ ಹರಡಲು ಪ್ರಾರಂಭಿಸಿದೆ' ಎಂದು ಮಮತಾ ಆರೋಪಿಸಿದ್ದಾರೆ.
'ಗಲಭೆಗಳನ್ನು ಆಯೋಜಿಸುವ, ಜನರನ್ನು ಕೊಲ್ಲುವ ಮತ್ತು ದಲಿತ ಮಹಿಳೆಯರನ್ನು ಹಿಂಸಿಸುವ ಕ್ರಿಯೆಗಳಲ್ಲಿ ಬಿಜೆಪಿ ತೊಡಗಿದೆ. ಬಂಗಾಳದ ಜನರಿಗೆ ಶಾಂತಿ ಬೇಕೆಂದರೆ, ರಾಜ್ಯವು ಗಲಭೆಗಳಿಂದ ಮುಕ್ತವಾಗಿ ಇರಬೇಕೆಂದರೆ ಟಿಎಂಸಿ ಪಕ್ಷವೊಂದೇ ಪರಿಹಾರ. ಬಂಗಾಳದಲ್ಲಿ ಅಧಿಕಾರ ನಡೆಸಲು ಬಿಜೆಪಿಯಂತಹ ಪಕ್ಷಕ್ಕೆ ಅವಕಾಶ ನೀಡಲೇಬಾರದು' ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು ವಿಧಾನಸಭೆ ಚುನಾವಣೆ ಆರಂಭವಾಗಲಿದ್ದು, 8 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 29ಕ್ಕೆ ಮತದಾನ ಮುಕ್ತಾಯಗೊಳ್ಳಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.