ಕೋಲ್ಕತ್ತ:ಅಲ್ಪಸಂಖ್ಯಾತ ಉಗ್ರವಾದಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಆಲ್ ಇಂಡಿಯಾ ಮಜಿಲಿಸ್ -ಇ-ಇತ್ತೆಹುದುಲ್ ಮುಸ್ಲೀಮೀನ್ (ಎಐಎಂಇಐಎಂ) ಮುಖ್ಯಸ್ಥಅಸಾದುದ್ದೀನ್ ಓವೈಸಿ ಆಕ್ರೋಶಕ್ಕೆ ಕಾರಣವಾಗಿದೆ.
ಮಮತಾ ಬ್ಯಾನರ್ಜಿ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಓವೈಸಿ ಆರೋಪಿಸಿದ್ದಾರೆ.
ಮಮತಾ ಹೇಳಿದ್ದು...:ಕೂಚ್ ಬೆಹಾರ್ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಹಿಂದುಗಳಲ್ಲಿರುವಂತೆಯೇ ಅಲ್ಪಸಂಖ್ಯಾತರಲ್ಲಿಯೂ ತೀವ್ರವಾದ ಹೊರಹೊಮ್ಮುತ್ತಿದೆ. ರಾಜಕೀಯ ಪಕ್ಷವೊಂದು ಬಿಜೆಪಿಯಿಂದ ಹಣ ಪಡೆದು ಈ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದೆ. ಆ ಪಕ್ಷ ಪಶ್ಚಿಮ ಬಂಗಾಳದ್ದಲ್ಲ. ಹೈದರಾಬಾದ್ನದ್ದು’ ಎಂದು ಹೇಳಿದ್ದಾರೆ. ಅಕ್ರಮ ವಲಸೆ ಸಮಸ್ಯೆ ಹೆಚ್ಚಿರುವ, ಬಾಂಗ್ಲಾದೇಶದ ಗಡಿಗೆ ಸಮೀಪದಲ್ಲಿರುವ ಪ್ರದೇಶದಲ್ಲಿ ಮಮತಾ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ, ಓವೈಸಿ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ.
ಓವೈಸಿ ತಿರುಗೇಟು:ಮಮತಾ ಹೇಳಿಕೆಗೆ ತಿರುಗೇಟು ನೀಡಿರುವ ಓವೈಸಿ, ‘ನಮ್ಮ ಕೆಲಸ ತೀವ್ರವಾದ ಎಂದು ಮಮತಾ ಬ್ಯಾನರ್ಜಿ ಹೇಳುವುದಾದರೆ ನಾನೇನೂ ಹೇಳಲಾರೆ. ಅವರು (ಮಮತಾ) ಬಿಜೆಪಿಯನ್ನು ಪಶ್ಚಿಮ ಬಂಗಾಳ ಪ್ರವೇಶಿಸಲು ಬಿಟ್ಟಿದ್ದೇತೀವ್ರವಾದ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಮಾನವ ಸೂಚ್ಯಂಕ ತೀರಾ ಕೆಳಮಟ್ಟದಲ್ಲಿರುವುದರಿಂದ ಅವರನ್ನು ಮಮತಾ ಕೀಳಾಗಿ ಕಾಣುತ್ತಿರುವುದೇ ತೀವ್ರವಾದ’ ಎಂದು ಹೇಳಿದ್ದಾರೆ.
‘ಮತಕ್ಕಾಗಿ ಮುಸ್ಲಿಮರನ್ನು ಓಲೈಕೆ ಮಾಡುವುದನ್ನು ದಯಮಾಡಿ ಬಿಟ್ಟುಬಿಡಿ’ ಎಂದು ಹೇಳಿರುವಓವೈಸಿ, ಹೆದರಿಕೆ ಮತ್ತು ಹತಾಶೆಯಿಂದ ಮಮತಾ ಆ ಹೇಳಿಕೆ ನೀಡಿದ್ದಾರೆ ಎಂದೂ ಹೇಳಿದ್ದಾರೆ.
‘ನನ್ನ ಕುರಿತಾಗಿ ನೀವು (ಮಮತಾ) ಮಾಡಿರುವ ಆರೋಪವು ನನ್ನ ಪಕ್ಷ ಅಸಾಧಾರಣ ಶಕ್ತಿಯಾಗಿ ರೂಪುಗೊಳ್ಳುತ್ತಿದೆ ಎಂಬ ಸಂದೇಶವನ್ನು ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ನೀಡಿದಂತೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.