ಕುಂತಿ (ಜಾರ್ಖಂಡ್): ಆಸ್ತಿ ವ್ಯಾಜ್ಯ ಸಂಬಂಧ ಬುಡಕಟ್ಟು ಸಮುದಾಯಕ್ಕೆ ಸೇರಿದ 20 ವರ್ಷದ ಯುವಕನೊಬ್ಬ ತನ್ನ ಸೋದರ ಸಂಬಂಧಿಯ ತಲೆ ಕಡಿದು, ಬಳಿಕ ಆ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮಾನವೀಯ ದುಷ್ಕೃತ್ಯ ಜಾರ್ಖಂಡ್ನ ಕುಂತಿ ಜಿಲ್ಲೆಯಲ್ಲಿ ನಡೆದಿದೆ.
ಕುಂತಿ ಜಿಲ್ಲೆಯ ಮುಹದ್ರು ಎಂಬಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಆರೋಪಿ, ಆತನ ಪತ್ನಿ ಸೇರಿ ಒಟ್ಟು 6 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎನ್ನುವುದು ಪೊಲೀಸರು ನೀಡಿದ ಮಾಹಿತಿ.
ಆರೋಪಿ ಹಾಗೂ ಕೊಲೆಯಾದ ವ್ಯಕ್ತಿಯ ಕಟುಂಬದ ನಡುವೆ ದೀರ್ಘ ಕಾಲದಿಂದ ಆಸ್ತಿ ವ್ಯಾಜ್ಯ ಇತ್ತು. ಹೀಗಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಹಿನ್ನಲೆ
ಕೊಲೆಯಾದ 24 ವರ್ಷದ ಕನು ಮುಂಡಾ ಎಂಬಾತನನ್ನು, ಆರೋಪಿ ಸಾಗರ್ ಮುಂಡಾ ಹಾಗೂ ಆತನ ಸ್ನೇಹಿತರು ಅಪಹರಿಸಿದ್ದಾರೆ. ಕನು ಮುಂಡಾ ಮನೆಯ ಉಳಿದ ಸದಸ್ಯರೆಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದಾಗ, ಈ ಕೃತ್ಯ ಎಸಗಲಾಗಿದೆ. ಸಂಜೆ ಕೂಲಿ ಮುಗಿಸಿ ಮನೆಗೆ ಬಂದಾಗ, ಊರವರು ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾರೆ. ಹುಡುಕಿದರೂ ಕನು ಮುಂಡಾ ಪತ್ತೆಯಾಗದಿದ್ದರಿಂದ ಆತನ ತಂದೆ ದಸಯ್ ಮುಂಡಾ ಪೊಲೀಸರಿಗೆ ದೂರು ನೀಡಿದ್ದಾರೆ.
ತಂಡ ರಚಿಸಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು, ಆರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ತನಿಖೆ ಮಾಡಿದಾಗ, ಕುಮಂಗ್ ಗುಪ್ಲಾ ಕಾಡಿನಲ್ಲಿ ಕನು ಮುಂಡಾನ ಮುಂಡ ಪತ್ತೆಯಾಗಿದೆ.
ಮೃತ ಕನು ಮುಂಡಾ ಅವರದ್ದೂ ಸೇರಿ ಒಟ್ಟು ಐದು ಮೊಬೈಲ್, 2 ರಕ್ತಸಿಕ್ತ ಆಯುಧಗಳು, ಒಂದು ಕೊಡಲಿ ಹಾಗೂ ಒಂದು ಎಸ್ಯುವಿ ವಶಪಡಿಸಿಕೊಳ್ಳಲಾಗಿದೆ.
ಕನು ಮುಂಡನ ತಲೆ ಕತ್ತರಿಸಿದ ಬಳಿಕವೂ ಆರೋಪಿಗಳು ವಿಕೃತಿ ಮರೆದಿದ್ದು, ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.