ADVERTISEMENT

ಉತ್ತರ ಪ್ರದೇಶದಲ್ಲಿ ಅಪಘಾತ: 6 ವರ್ಷದ ಮಗುವನ್ನು 2 ಕಿ.ಮೀ ದೂರ ಎಳೆದೊಯ್ದ ಟ್ರಕ್

ಐಎಎನ್ಎಸ್
Published 26 ಫೆಬ್ರುವರಿ 2023, 10:51 IST
Last Updated 26 ಫೆಬ್ರುವರಿ 2023, 10:51 IST
   

ಮಹೋಬಾ (ಉತ್ತರ ಪ್ರದೇಶ): ಮತ್ತೊಂದು ಆಘಾತಕಾರಿ ಹಿಟ್​​ ಆಂಡ್ ರನ್ ಪ್ರಕರಣದಲ್ಲಿ ಟ್ರಕ್‌ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದು 6 ವರ್ಷದ ಮಗುವನ್ನು 2 ಕಿ.ಮೀಗೂ ಅಧಿಕ ದೂರ ಎಳೆದೊಯ್ದಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಇಲ್ಲಿನ ಕಾನ್ಪುರ-ಸಾಗರ್ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತದ ವೇಳೆ ಸ್ಕೂಟಿಯಲ್ಲಿ ಚಲಿಸುತ್ತಿದ್ದ ಅಜ್ಜ ಉದಿತ್ ನಾರಾಯಣ ಚಾನ್ಸೋರಿಯಾ(67) ಹಾಗೂ ಮೊಮ್ಮಗ ಸಾತ್ವಿಕ್ ಮೃತಪಟ್ಟಿದ್ದಾರೆ.

ಟ್ರಕ್‌ ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಉದಿತ್‌ ನಾರಾಯಣ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮಗು ಸ್ಕೂಟಿ ಸಮೇತವಾಗಿ ಟ್ರಕ್‌ ಅಡಿಗೆ ಸಿಲುಕಿಕೊಂಡಿದೆ. ಚಾಲಕ ಸುಮಾರು ಎರಡು ಕಿ.ಮೀ ದೂರ ಟ್ರಕ್‌ ಚಾಲನೆ ಮಾಡಿಕೊಂಡು ಹೋಗಿದ್ದು, ಟ್ರಕ್‌ ಅಡಿಯಲ್ಲಿದ್ದ ಬಾಲಕನನ್ನು ಎಳೆದುಕೊಂಡು ಹೋಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ADVERTISEMENT

ಇದನ್ನು ಗಮನಿಸಿದ ಹಲವು ಸವಾರರು ಟ್ರಕ್‌ ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ಚಾಲಕ ಯಾವುದನ್ನು ಲೆಕ್ಕಿಸದೇ ಟ್ರಕ್‌ ಓಡಿಸಿದ್ದಾನೆ. ಕೊನೆಗೆ ಸ್ಥಳೀಯರು ಟ್ರಕ್ ನಿಲ್ಲಿಸಲು ರಸ್ತೆಯ ಮೇಲೆ ಕಲ್ಲು ಮತ್ತು ಬಂಡೆಗಳನ್ನು ಇಟ್ಟಿದ್ದಾರೆ.

ಟ್ರಕ್‌ ನಿಲ್ಲಿಸುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಸ್ಕೂಟಿ ಹಾಗೂ ಶವವನ್ನು ಹೊರತೆಗೆಯಲು ಯತ್ನಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ತಾತ ಮತ್ತು ಮೊಮ್ಮಗ ಮನೆಯಿಂದ ಮಾರುಕಟ್ಟೆಗೆ ಸ್ಕೂಟಿಯಲ್ಲಿ ಹೊರಟಿದ್ದು, ದಾರಿಯಲ್ಲಿ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಮಹೋಬ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಟ್ರಕ್ ಅನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಇದೇ ರೀತಿ ಪ್ರಕರಣ ವರದಿಯಾಗಿತ್ತು. ಯುವತಿಯೊಬ್ಬಳು ಕಾರಿನಡಿಗೆ ಸಿಲುಕಿ 11 ಕಿ.ಮೀ ಎಳೆದುಕೊಂಡು ಹೋದ ಘಟನೆ ದೇಶದಾದ್ಯಂತ ಸದ್ದು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.