ಲಖನೌ: ವರದಕ್ಷಿಣೆ ತರದ ಹೆಂಡತಿಯನ್ನು ಕೊಲೆ ಮಾಡಲೆಂದು ಇಬ್ಬರು ಹಾವಾಡಿಗರನ್ನು ನೇಮಿಸಿಕೊಂಡು ವಿಷಕಾರಿ ಹಾವಿನಿಂದ ಪತ್ನಿಗೆ ಕಚ್ಚಿಸಿರುವ ಘಟನೆ ಉತ್ತರ ಪ್ರದೇಶದ ಬದಾಯುನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬದಾಯುಜಿಲ್ಲೆಯ ನಿವಾಸಿಯಾದ 25 ವರ್ಷದ ಫರ್ಜಾನಾ(ಹೆಸರು ಬದಲಿಸಲಾಗಿದೆ) ಹಾವಿನಿಂದ ಕಚ್ಚಿಸಿಕೊಂಡ ಬಳಿಕ ಬದುಕುಳಿದಿದ್ದಾರೆ. ಆರೋಪಿ ಪತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವರದಿಗಳ ಪ್ರಕಾರ, ಕಳೆದ ಮೂರು ವರ್ಷಗಳ ಹಿಂದೆ ಫರ್ಜಾನಾ ಲಕ್ಷ್ಮಿಪುರ ಜಿಲ್ಲೆಯ ಗ್ರಾಮವೊಂದರ ನಿವಾಸಿ ಅಹ್ಮದ್ ಶರೀಫ್ ಎಂಬುವರನ್ನು ವಿವಾಹವಾಗಿದ್ದರು.
ವರದಕ್ಷಿಣೆಗಾಗಿಪತ್ನಿ ಫರ್ಜಾನಾಳನ್ನುಆತ ಚೆನ್ನಾಗಿ ಥಳಿಸುತ್ತಿದ್ದ ಮತ್ತು ಪೋಷಕರ ಮನವೊಲಿಸಿ ವರದಕ್ಷಿಣೆ ನೀಡಲಿಲ್ಲವೆಂದು ವಿಚ್ಛೇದನ ನೀಡುವುದಾಗಿ ಬೆದರಿಸುತ್ತಿದ್ದ. ಬಳಿಕ ಫರ್ಜಾನಾಳನ್ನು ಕೊಲ್ಲಲು ಆತ ಸ್ನೇಹಿತರಾಗಿದ್ದ ಇಬ್ಬರು ಹಾವಾಡಿಗರ ಜತೆ ಸೇರಿ ಯೋಜನೆ ರೂಪಿಸಿದ್ದ.
ಯೋಜನೆ ಪ್ರಕಾರ ಬರೇಲಿಯಲ್ಲಿ ವೈದ್ಯರನ್ನು ಭೇಟಿ ಮಾಡುವುದಕ್ಕಾಗಿ ಬರುವಂತೆ ತನ್ನ ಪತ್ನಿಯನ್ನು ಕರೆದಿದ್ದಾನೆ. ಇದಕ್ಕೆ ಒಪ್ಪಿಕೊಂಡ ಫರ್ಜಾನಾ ಮತ್ತು ಆತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಕೆಲ ಕಿಲೋ ಮೀಟರ್ ದೂರ ಸಾಗುತ್ತಿದ್ದಂತೆ ವಾಹನದಲ್ಲಿ ಮತ್ತಿಬ್ಬರು ಹತ್ತಿಕೊಂಡಿದ್ದಾರೆ. ಅವರು ಬ್ಯಾಗಿನಲ್ಲಿ ವಿಷಕಾರಿ ಹಾವುಗಳನ್ನು ತಂದಿದ್ದರು ಎಂದು ವರದಿಯಲ್ಲಿ ತಿಳಿಸಿದೆ.
ಬಳಿಕ ಅವರು ಕಾರಿನಿಂದ ಕೆಳಗಿಳಿಯುವ ಮುನ್ನ ವಿಷಕಾರಿ ಹಾವಿನಿಂದ ಫರ್ಜಾನಾಳಿಗೆ ಕಚ್ಚಿಸಿದ್ದಾರೆ. ಅಹ್ಮದ್ ನಂತರ ಮನೆಗೆ ಹಿಂತಿರುಗಿದ್ದಾನೆ ಮತ್ತು ಪ್ರಜ್ಞೆ ತಪ್ಪಿದ್ದ ತನ್ನ ಪತ್ನಿಯನ್ನು ರೂಂನೊಳಗೆ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಅದೃಷ್ಟವಶಾತ್ ನೆರೆಹೊರೆಯವರು ಬಂದು ನೋಡಿದಾ ಫರ್ಜಾನಾ ಪ್ರಜ್ಞೆ ತಪ್ಪಿ ಬಿದ್ದಿರುವುದು ತಿಳಿದಿದೆ. ಬಳಿಕ ಆಸ್ಪತ್ರೆಗೆ ಸೇರಿಸಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.