ರಾಯಗಡ: ಆನೆ ದಾಳಿಗೊಳಗಾಗಿ 21 ವರ್ಷದ ಯುವಕ ಮೃತಪಟ್ಟ ಘಟನೆ ಛತ್ತೀಸಗಡದ ರಾಯಗಡ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಆನೆ ಜೊತೆ ಯುವಕ ಸೆಲ್ಫಿ ತೆಗೆಯಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಯುವಕನನ್ನು ಮನೋಹರ ಪಟೇಲ್ ಎಂದು ಗುರುತಿಸಲಾಗಿದ್ದು, ಸಾರಂಗ ಅರಣ್ಯ ವ್ಯಾಪ್ತಿಯ ಗುಧ್ಯಾರಿ ಗ್ರಾಮದಲ್ಲಿ ಘಟನೆ ನಡೆದಿದೆ. ಸೆಲ್ಫಿ ತೆಗೆಯುತ್ತಿದ್ದಾಗ ಮನೋಹರ್ ಜೊತೆ ಅವರ ಮೂರು ಜನ ಸ್ನೇಹಿತರು ಕೂಡ ಇದ್ದರು. ‘ಆನೆ ಅನಿರೀಕ್ಷಿತವಾಗಿ ಅವರ ಮೇಲೆ ದಾಳಿ ನಡೆಸಿದಾಗ ಸ್ನೇಹಿತರು ಅದೃಷ್ಟವಶಾತ್ ಪಾರಾದರು. ಆದರೆ ದಾಳಿಯಲ್ಲಿ ಮನೋಹರ್ ಸಾವನ್ನಪ್ಪಿದರು‘ ಎಂದು ರಾಯಗಡ ಅರಣ್ಯ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಇದೇ ಹೆಣ್ಣಾನೆ ಮಾಲ್ಡಾ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದರಿಂದ ಅವರು ಮೃತಪಟ್ಟಿದ್ದರು. ಈ ಆನೆ ನೆರೆಯ ಮಹಾಸಮುಂಡ್ ಜಿಲ್ಲೆಯ ಸರೈಪಲ್ಲಿ ಅರಣ್ಯದಿಂದ ಸಾರಂಗ ಅರಣ್ಯ ವ್ಯಾಪ್ತಿಗೆ ತನ್ನ ಮರಿ ಜೊತೆಯಲ್ಲಿ ಬಂದಿದೆ. ಆದರೆ ಮರಿಯಾನೆ ಬೇರ್ಪಟ್ಟಿದ್ದರಿಂದ ಆನೆ ವ್ಯಗ್ರವಾಗಿದೆ. ಈ ಎರಡೂ ಆನೆಗಳನ್ನು ಕಾಡಿನೊಳಗೆ ಓಡಿಸಲುಅರಣ್ಯ ಸಿಬ್ಬಂದಿ ಪ್ರಯತ್ನ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.