ಕೋಟ (ರಾಜಸ್ಥಾನ): ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಆರು ವರ್ಷದ ಮಗನನ್ನು ಹತ್ಯೆಗೈದು ಬಾವಿಗೆ ಎಸೆದಿರುವ ಘಟನೆ ರಾಜಸ್ಥಾನದ ಜಲವಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆರೋಪಿ ಗೋಕುಲ್ ಸಿಂಗ್ ಸೊಂಧ್ಯಾ ರಜಪೂತ್ (28) ಮದ್ಯವ್ಯಸನಿಯಾಗಿದ್ದು, ಮೃತದೇಹಗಳನ್ನು ತೋಟದಲ್ಲಿರುವ ಬಾವಿಗೆ ಎಸೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸರ್ಕಲ್ ಅಧಿಕಾರಿ ಬ್ರಿಜ್ಮೋಹನ್ ಮೀನಾ ತಿಳಿಸಿದ್ದಾರೆ.
ಚನ್ ಗ್ರಾಮದಲ್ಲಿ ಪತ್ನಿ ರಾಮ್ಕುನ್ವಾರ್ (25) ಹಾಗೂ ಮಗ ಇಶ್ವರ್ ಸಿಂಗ್ ಅವರನ್ನು ಬುಧವಾರ ಬೆಳಗ್ಗೆ ಹತ್ಯೆಗೈಯಲಾಗಿದೆಎಂದು ಡಿಎಸ್ಪಿ ತಿಳಿಸಿದ್ದಾರೆ.
ಸಂಜೆಯ ವೇಳೆಗೆ ಬಾವಿಯಲ್ಲಿ ಮೃತದೇಹ ತೇಲಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದರು. ಬಳಿಕ ಮೃತದೇಹವನ್ನು ಹೊರತೆಗೆಯಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯ ಸಂಸ್ಕಾರಕ್ಕಾಗಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಏಳೆಂಟು ವರ್ಷಗಳಿಂದ ಗೋಕಲ್ ಹಾಗೂ ಪತ್ನಿ ಜೊತೆಯಾಗಿ ವಾಸಿಸುತ್ತಿದ್ದಾರೆ. ಆದರೆ ಕೊಲೆಯ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.