ಬಾರಾಬಂಕಿ (ಯುಪಿ): ಸಹೋದರಿ ಮದುವೆಗೆ ಎಲ್ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ನೀಡುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದು, ಪತ್ನಿಯ ಸಂಬಂಧಿಕರು ಗಂಡನನ್ನು ಹತ್ಯೆಗೈದಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬುಧವಾರ ನೆಡೆದಿದೆ.
ಪೊಲೀಸರ ಪ್ರಕಾರ, ಕ್ಷಮಾ ಮಿಶ್ರಾ ಮತ್ತು ಪತಿ ಚಂದ್ರ ಪ್ರಕಾಶ್ ಮಿಶ್ರಾ ನಡುವೆ ಮಂಗಳವಾರ ಜಗಳ ನಡೆದಿತ್ತು. ಕ್ಷಮಾ ತನ್ನ ಸಹೋದರ ಮತ್ತು ಇತರ ಕೆಲ ಸಂಬಂಧಿಕರನ್ನು ಕದರಾಬಾದ್ನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಾಗ ಈ ಘಟನೆ ಸಂಭವಿಸಿದೆ.
ಏಪ್ರಿಲ್ 26ರಂದು ತನ್ನ ಸಹೋದರಿ ಮದುವೆಗೆ ಎಲ್ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲು ಚಂದ್ರು ಬಯಸಿದ್ದರು. ಆದರೆ, ಅವರ ಪತ್ನಿ ಕ್ಷಮಾ ಅದನ್ನು ವಿರೋಧಿಸಿದರು ಎಂದು ಫತೇಪುರ್ ಪೊಲೀಸ್ ಸರ್ಕಲ್ ಆಫೀಸರ್ (ಸಿಒ) ಡಾ. ಬಿನು ಸಿಂಗ್ ಹೇಳಿದ್ದಾರೆ.
ಈ ವಿಚಾರದಲ್ಲಿ ಕ್ಷಮಾ ಸಂಬಂಧಿಕರ ಹಸ್ತಕ್ಷೇಪವನ್ನು ಚಂದ್ರು ಪ್ರಶ್ನಿಸಿದಾಗ, ಅವರು ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಚಂದ್ರು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ಎಂದು ಸಿಒ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಹೆಂಡತಿ ಮತ್ತು ಆತನ ಸಹೋದರ ಸೇರಿ ಐವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.