ಅಗರ್ತಲಾ: ತ್ರಿಪುರಾದಲ್ಲಿ ಶನಿವಾರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ರಾಜೀನಾಮೆ ನೀಡಿದ್ದು, ಬಿಜೆಪಿಯ ರಾಜ್ಯಸಭಾ ಸದಸ್ಯ ಮಾಣಿಕ್ ಸಾಹಾ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಸಂಜೆ ನಡೆದ ತುರ್ತು ಸಭೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರೂ ಆದ ಮಾಣಿಕ್ ಸಾಹಾ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು.
ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಮರುದಿನವೇ 50 ವರ್ಷದ ದೇವ್ ಮುಖ್ಯಮಂತ್ರಿ ಸ್ಥಾನ ತೊರೆದಿದ್ದಾರೆ.
‘ಶಾಸಕಾಂಗ ಪಕ್ಷದ ನಾಯಕರನ್ನಾಗಿ69 ವರ್ಷದ ಮಾಣಿಕ್ ಸಾಹಾ ಹೆಸರನ್ನು ದೇವ್ಅವರು ಪ್ರಸ್ತಾಪಿಸುತ್ತಿದ್ದಂತೆ, ಸಚಿವ ರಾಮ್ ಪ್ರಸಾದ್ ಪಾಲ್ ವಿರೋಧಿಸಿದರು. ಇದು ಶಾಸಕರ ನಡುವೆ ವಾಗ್ವಾದಕ್ಕೂ ಕಾರಣವಾಯಿತು. ಪರಿಸ್ಥಿತಿ ತಿಳಿಯಾಗುವ ಮೊದಲು ರಾಮ್ ಪ್ರಸಾದ್ ಪಾಲ್ ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದರು’ಎಂದು ಮೂಲಗಳು ತಿಳಿಸಿವೆ.
‘ತ್ರಿಪುರಾ ರಾಜಮನೆತನದ, ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರು ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಪಾಲ್ ಬಯಸಿದ್ದರು’ ಎಂದು ಮೂಲಗಳುಹೇಳಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಣಿಕ್ ಸಾಹಾ ‘ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಹಾಗೆಯೇ ಮುಂದುವರಿಯುತ್ತೇನೆ’ ಎಂದರು.
ವರಿಷ್ಠರಿಗೆ ಧನ್ಯವಾದ
ಮುಖ್ಯಮಂತ್ರಿಯಾಗಿ ತ್ರಿಪುರಾಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಕೇಂದ್ರ ನಾಯಕತ್ವ ಮತ್ತು ತ್ರಿಪುರಾದ ಜನರಿಗೆ ಧನ್ಯವಾದ. ತುಂಬು ಹೃದಯದಿಂದ ನನ್ನ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದೇನೆ. ಮುಂದೆಯೂ ನನ್ನ ರಾಜ್ಯದ ಒಳಿತಿಗಾಗಿ ಶ್ರಮಿಸುವುದಾಗಿ ವಿಪ್ಲವ್ ದೇವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಒದಿ..ತ್ರಿಪುರಾ ಸಿಎಂ ವಿಪ್ಲವ್ ಕುಮಾರ್ ದೇವ್ ರಾಜೀನಾಮೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.