ಇಂಫಾಲ್ : ಮಣಿಪುರದ ಉಕರುಲ್ ಜಿಲ್ಲೆಯ ಫುಂಗಯರ್ ವಿಧಾನಸಭಾ ಕ್ಷೇತ್ರದ ಕನಿಷ್ಠ 43 ಬಿಜೆಪಿ ಸದಸ್ಯರು ಪಕ್ಷಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಇದೇ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ರಾಜ್ಯ ಬಿಜೆಪಿ ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿಲ್ಲ.
ನಾಗಾ ಸಮುದಾಯ ಬಹುಸಂಖ್ಯಾತರಾಗಿರುವ ಜಿಲ್ಲೆಯ ಫುಂಗಯರ್ ಮಂಡಲದಲ್ಲಿ ಈ ರಾಜೀನಾಮೆಗಳು ಸಲ್ಲಿಕೆಯಾಗಿದ್ದು, ರಾಜೀನಾಮೆ ನೀಡಿದವರಲ್ಲಿ ಮಂಡಲ ಅಧ್ಯಕ್ಷರು, ಮಹಿಳಾ, ಯುವ ಮತ್ತು ಕಿಸಾನ್ ಮೋರ್ಚಾಗಳ ಅಧ್ಯಕ್ಷರು ಮತ್ತು ಕ್ಷೇತ್ರದ ಬೂತ್ ಅಧ್ಯಕ್ಷರು ಸೇರಿದ್ದಾರೆ.
‘ಪಕ್ಷದೊಳಗಿನ ಈಗಿನ ಸ್ಥಿತಿಯ ಬಗ್ಗೆ ತೀವ್ರ ಕಳವಳವಿದೆ. ಸಮಾಲೋಚನೆ ಮತ್ತು ಒಳಗೊಳ್ಳುವಿಕೆಯ ಕೊರತೆಯಿದೆ. ತಳಮಟ್ಟದ ನಾಯಕತ್ವದ ಬಗ್ಗೆ ಗೌರವ ಇಲ್ಲ. ಪಕ್ಷ ಮತ್ತು ಅದರ ಸಿದ್ಧಾಂತಕ್ಕೆ ನಾವು ಸದಾ ನಿಷ್ಠರು’ ಎಂದು ರಾಜೀನಾಮೆ ಸಲ್ಲಿಸಿರುವ ಬಿಜೆಪಿ ಸದಸ್ಯರು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.