ADVERTISEMENT

ಮಣಿಪುರ ಹಿಂಸಾಚಾರ | ಪೂರ್ಣ ಆಡಿಯೊವನ್ನು ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ: SC

ಪಿಟಿಐ
Published 15 ಡಿಸೆಂಬರ್ 2025, 15:44 IST
Last Updated 15 ಡಿಸೆಂಬರ್ 2025, 15:44 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರ ಪಾತ್ರವಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವ ಸೋರಿಕೆಯಾದ ಸಂಪೂರ್ಣ ಆಡಿಯೊ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕುಮಾರ್‌ ಮತ್ತು ಅಲೋಕ್‌ ಆರಾಧೆ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠವು, ‘ಅರ್ಜಿದಾರರ ಪರವಾಗಿ ನವೆಂಬರ್‌ 20ರಂದು ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, ಆಡಿಯೊದ ಆಯ್ದ ತುಣುಕುಗಳನ್ನು ಮಾತ್ರ ಗುಜರಾತ್‌ನ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ (ಎನ್‌ಎಫ್‌ಎಸ್‌ಯು) ಕಳುಹಿಸಿರುವ ಕುರಿತು ಮಾಹಿತಿ ಇದೆ. ಸೋರಿಕೆಯಾದ 48 ನಿಮಿಷಗಳ ಸಂಪೂರ್ಣ ಆಡಿಯೊವನ್ನು ಏಕೆ ಪರೀಕ್ಷೆಗೆ ಕಳುಹಿಸಲಿಲ್ಲ’ ಎಂದು ಪ್ರಶ್ನಿಸಿತು.

ಅರ್ಜಿದಾರರ ಪರವಾಗಿ ಹಾಜರಿದ್ದ ವಕೀಲ ಪ್ರಶಾಂತ್‌ ಭೂಷಣ್‌, ‘ಅರ್ಜಿದಾರರು ಸಲ್ಲಿಸಿದ ಪೂರ್ಣ ಆಡಿಯೊ ತುಣುಕುಗಳನ್ನು ಬಹುಶಃ ಎನ್‌ಎಫ್‌ಎಸ್‌ಯುಗೆ ಕಳುಹಿಸಲಾಗಿಲ್ಲ. ಒಟ್ಟು ಆಡಿಯೊ ಟೇಪ್‌ಗಳು ಸುಮಾರು 56 ನಿಮಿಷಗಳದ್ದಾಗಿದ್ದು, ಅರ್ಜಿದಾರರು ನ್ಯಾಯಾಲಯಕ್ಕೆ 48 ನಿಮಿಷಗಳ ಆಡಿಯೊವನ್ನು ಸಲ್ಲಿಸಿದ್ದಾರೆ. ಆಡಿಯೊದ ಉಳಿದ ಭಾಗವು ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ಗುರುತಿಸುತ್ತದೆ. ಅದನ್ನು ಬಹಿರಂಗಪಡಿಸಿದರೆ ಅವರ ಜೀವಕ್ಕೆ ಅಪಾಯವಿದೆ’ ಎಂದು ಹೇಳಿದರು.

ADVERTISEMENT

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಅವರು, ಪ್ರಮಾಣಪತ್ರಕ್ಕೆ ಪ್ರತಿಕ್ರಿಯಿಸಲು ಒಂದು ವಾರದ ಸಮಯಾವಕಾಶ ಕೋರಿದರು. ಹೀಗಾಗಿ, ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿತು.

ಈ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕೆಂದು ಕೋರಿ ಕುಕಿ ಆರ್ಗನೈಸೇಷನ್‌ ಫಾರ್‌ ಹ್ಯೂಮನ್‌ ರೈಟ್ಸ್‌ ಟ್ರಸ್ಟ್‌ (ಕೊಹೂರ್) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

‘ಮಣಿಪುರದ ಕುಕಿ ಪ್ರಾಬಲ್ಯದ ಪ್ರದೇಶಗಳ ವಿರುದ್ಧ ದೊಡ್ಡ ಪ್ರಮಾಣದ ಕೊಲೆ, ಹಿಂಸಾಚಾರವನ್ನು ಪ್ರಚೋದಿಸುವುದು, ಸಂಘಟಿಸುವುದರಲ್ಲಿ ಬಿರೇನ್‌ ಸಿಂಗ್‌ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಕೊಹೂರ್‌ನ ಅರ್ಜಿಯಲ್ಲಿ ಆರೋಪಿಸಲಾಗಿದೆ.

‘ಸೋರಿಕೆಯಾದ ಆಡಿಯೊ ತುಣುಕುಗಳನ್ನು ತಿರುಚಲಾಗಿದೆ’ ಎಂದು ಹೇಳುವ ಮೂಲಕ ಎನ್‌ಎಫ್‌ಎಸ್‌ಯು ಕ್ಲೀನ್‌ಚಿಟ್‌ ನೀಡಿತ್ತು. 

ಬಿರೇನ್‌ ಸಿಂಗ್‌ ಅವರು ಫೆಬ್ರುವರಿ 9ರಂದು ಮಣಿಪುರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.