ADVERTISEMENT

ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

‘ಮನದ ಮಾತು’ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 15:54 IST
Last Updated 22 ಫೆಬ್ರುವರಿ 2026, 15:54 IST
<div class="paragraphs"><p>ನರೇಂದ್ರ ಮೋದಿ–ಪಿಟಿಐ ಚಿತ್ರ</p></div>

ನರೇಂದ್ರ ಮೋದಿ–ಪಿಟಿಐ ಚಿತ್ರ

   

ನವದೆಹಲಿ: ‘ದೇಶದ ಕೃಷಿ ಉತ್ಪನ್ನಗಳು ವಿದೇಶಕ್ಕೂ ರವಾನೆಯಾಗುತ್ತಿವೆ. ನಂಜನಗೂಡಿನ ರಸಬಾಳೆ, ಮೈಸೂರಿನ ವೀಳ್ಯೆದೆಳೆ ಹಾಗೂ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಿಂಬೆಹಣ್ಣು ಮಾಲ್ದೀವ್ಸ್‌ಗೂ ರಫ್ತಾಗುತ್ತಿದೆ’ ಎಂದು ಮೋದಿ ಪ್ರಶಂಸಿಸಿದರು.

ಮೋದಿ ಉಲ್ಲೇಖಿಸಿದ ಪ್ರಮುಖ ಅಂಶಗಳು...

*ತಮಿಳುನಾಡಿನ ಜನರ ಹೃದಯದಲ್ಲಿ ಅಮ್ಮ ಜಯಲಲಿತಾ ನೆಲಸಿದ್ದಾರೆ.

ADVERTISEMENT

*ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಗುಣಗಾನ

*ಎ.ಐ ಶೃಂಗಸಭೆಯಲ್ಲಿನ ಸಾಧನೆಗಳ ನೆನಪು

*ಜಾಗತಿಕ ಮಟ್ಟದಲ್ಲಿ ಬೇಡಿಕೆ ಇರುವ ಉತ್ಪನ್ನ ಸೇವೆಗಳನ್ನು ಭಾರತ ಉತ್ಪಾದಿಸಬೇಕು

*250 ವರ್ಷಗಳ ಬಳಿಕ ಕೇರಳದಲ್ಲಿ ಕುಂಭಮೇಳ– ಜನರಿಂದಲೂ ಭರ್ಜರಿ ಸ್ಪಂದನ

ಮಾಸಿಕ ‘ಮನದ ಮಾತು’ ಕಾರ್ಯಕ್ರಮದಲ್ಲಿ ಈ ವಿಷಯ ಉಲ್ಲೇಖಿಸಿದ ಅವರು, ‘ಈ ಉತ್ಪನ್ನಗಳು ವಿಶೇಷ ರುಚಿ ಹಾಗೂ ಗುಣಮಟ್ಟ ಹೊಂದಿದ್ದು, ಭೌಗೋಳಿಕ ಮಾನ್ಯತೆಯನ್ನು ಹೊಂದಿವೆ. ಗುಣಮಟ್ಟದ ಜೊತೆಗೆ ಬೆಳೆಯುವ ‍ಪ್ರಮಾಣವು ಏರಿಕೆಯಾಗಿದೆ’ ಎಂದರು.

‘ಕೇರಳದ ಕೃಷಿ ಭೂಮಿಯೊಂದರಲ್ಲಿ 570 ತಳಿ ಭತ್ತ ಬೆಳೆಯಲಾಗಿದ್ದು, ಒಡಿಶಾದ ರೈತರೊಬ್ಬರು ನೀರು ಉಳಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ  ರೈತರ ಕಠಿಣ ಶ್ರಮದಿಂದಲೇ ವಿಶ್ವದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿರುವುದು ಅಂಕಿಅಂಶಗಳಿಂದ ಕಂಡುಬಂದಿದೆ. ದೇಶದ ಅಗತ್ಯವನ್ನು ಪೂರೈಸುವ ಜೊತೆಗೆ ವಿಶ್ವಕ್ಕೂ ಪೂರೈಕೆ ಮಾಡುತ್ತಿದೆ’ ಎಂದು ಹೇಳಿದರು.

‘ಉದಾತ್ತ ನಡೆ’: ಅಂಗಾಂಗ ದಾನದ ಉದಾತ್ತ ನಡೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಈ ವಿಷಯದ ಜಾಗೃತಿಯಿಂದ ಅಗತ್ಯವಿರುವ ವ್ಯಕ್ತಿಗಳಿಗೆ ನೆರವಾಗುವ ಜೊತೆಗೆ ದೇಶದ ವೈದ್ಯಕೀಯ ಕ್ಷೇತ್ರದ ಸಂಶೋಧನೆಯನ್ನು ಬಲಪಡಿಸಲಿದೆ ಎಂದು ತಿಳಿಸಿದರು.

ಇತ್ತೀಚಿಗೆ ಕೇರಳದ 10 ತಿಂಗಳ ಮಗು ಆಲಿನ್‌ ಶೆರಿನ್‌ ಅಬ್ರಹಾಂ ಮೃತಪಟ್ಟ ಸಂದರ್ಭದಲ್ಲಿ ಹೆತ್ತವರು ಅಂಗಾಂಗ ದಾನ ಮಾಡಿದ್ದನ್ನು ಸ್ಮರಿಸಿದರು.

‘ಕೆಲವು ದಿನಗಳ ಹಿಂದೆ, ಕೇರಳದ ಮಗು ಆಲಿನ್‌ ಶೆರಿನ್‌ ಅಬ್ರಹಾಂ ಪ್ರಾಣ ಕಳೆದುಕೊಂಡಿತು. ಹೆತ್ತವರ ನೋವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇಂತಹ ನೋವಿನ ಸಂದರ್ಭದಲ್ಲಿಯೂ ಮಗುವಿನ ತಂದೆ ಅರುಣ್‌ ಅಬ್ರಹಾಂ, ತಾಯಿ ಶೆರಿನ್‌ ಅವರು ಅಂಗಾಂಗ ದಾನದ ಕುರಿತು ತೆಗೆದುಕೊಂಡ ನಿರ್ಧಾರವು ದೇಶದ ಪ್ರತಿಯೊಬ್ಬ ನಾಗರಿಕರ ಹೃದಯದಲ್ಲಿ ಗೌರವ ತುಂಬುವಂತೆ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆಲಿನ್ ಶೆರಿನ್‌ ನಮ್ಮ ಜೊತೆಗಿರಲು ಸಾಧ್ಯವಿಲ್ಲ. ಆದರೆ, ಆಕೆಯ ಹೆಸರು ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂದು ದಾಖಲೆಯಾಗಿದೆ’ ಎಂದು ಸ್ಮರಿಸಿದರು.

ಲಕ್ಷ್ಮೀ ಸಾಧನೆಗೂ ಮೆಚ್ಚುಗೆ: ‘ಕಳೆದ ವರ್ಷ ದೆಹಲಿ ಮೂಲದ ಲಕ್ಷ್ಮೀ ದೇವಿ ಅವರು 14 ಕಿ.ಮೀ. ಚಾರಣ ಮಾಡಿ ಕೇದರಾನಾಥ ದೇವಸ್ಥಾನಕ್ಕೆ ತಲುಪಿದ್ದರು. ಈ ಚಾರಣ ಕೈಗೊಳ್ಳುವ ಮುನ್ನ ಅವರ ಹೃದಯವು ಶೇಕಡಾ 15ರಷ್ಟು ಮಾತ್ರ ಕೆಲಸ ಮಾಡುತ್ತಿತ್ತು. ನಂತರ ಮೃತ ವ್ಯಕ್ತಿಯಿಂದ ಹೃದಯ ದಾನ ಪಡೆದುಕೊಂಡು, ಕಸಿ ಮಾಡಿಸಿಕೊಂಡು ಈ ಚಾರಣ ಮಾಡಿ, ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ’ ಎಂದು ಈ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪಶ್ಚಿಮ ಬಂಗಾಳದ ಗೌರಂಗ್‌ ಬ್ಯಾನರ್ಜಿ ಕೂಡ ಸಮುದ್ರಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿರುವ ನಾಥುಲಾಗೆ ಎರಡು ಬಾರಿ ಯಶಸ್ವಿಯಾಗಿ ಏರಿದ್ದರು. ವಿಶೇಷವೆಂದರೆ, ಶ್ವಾಸಕೋಶ ಕಸಿ ಮಾಡಿಸಿಕೊಂಡ ನಂತರ ಈ ಸಾಧನೆ ಮಾಡಿದ್ದರು. ಅದೇ ರೀತಿ, ರಾಜಸ್ಥಾನದ ಸಿಕಾರ್‌ನ ರಾಮ್‌ದೇವ್ ಸಿಂಗ್‌ ಅವರು ಮೂತ್ರಪಿಂಡ ಕಸಿ ಮಾಡಿಕೊಂಡ ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ’ ಎಂದು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.