ADVERTISEMENT

5 ವರ್ಷದ ಬಳಿಕವೂ ಜಿಎಸ್‌ಟಿ ಪರಿಹಾರ ವಿಸ್ತರಿಸಲು ಹಲವು ರಾಜ್ಯಗಳಿಂದ ವಿನಂತಿ

ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ

ಪಿಟಿಐ
Published 14 ಮಾರ್ಚ್ 2022, 16:16 IST
Last Updated 14 ಮಾರ್ಚ್ 2022, 16:16 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: 2022ರ ಜೂನ್‌ ಬಳಿಕವೂ ಜಿಎಸ್‌ಟಿ ಪರಿಹಾರವನ್ನು ವಿಸ್ತರಿಸಲು ಹಲವು ರಾಜ್ಯಗಳು ವಿನಂತಿಸಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ತಿಳಿಸಿದರು.

ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಐದು ವರ್ಷಗಳವರೆಗೆ ಜಿಎಸ್‌ಟಿ ಪರಿಹಾರವನ್ನು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. ಆದರೆ, ಮುಂದಿನ ಐದು ವರ್ಷಗಳಿಗೂ ಅದನ್ನು ವಿಸ್ತರಿಸುವ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ.

ಕೋವಿಡ್‌ ಪಿಡುಗಿನಿಂದ ಉಂಟಾದ ತೊಂದರೆಗಳ ದೃಷ್ಟಿಯಿಂದ ಪರಿಹಾರ ಕಾರ್ಯವಿಧಾನವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ವಿನಂತಿಸಿದ ರಾಜ್ಯ ಸರ್ಕಾರಗಳಿಂದ ಸರ್ಕಾರವು ಪ್ರಸ್ತಾವನೆಗಳನ್ನು ಸ್ವೀಕರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಿಎಸ್‌ಟಿ ಮಂಡಳಿ ಮತ್ತು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರಗಳಲ್ಲಿ ಅನೇಕ ರಾಜ್ಯಗಳು ಪರಿಹಾರದ ಅವಧಿಯನ್ನು ವಿಸ್ತರಿಸಲು ವಿನಂತಿಸಿವೆ’ ಎಂದಷ್ಟೇ ಅವರು ತಿಳಿಸಿದರು.

ADVERTISEMENT

2017-18, 2018-19 ಮತ್ತು 2019-20 ರ ಹಣಕಾಸು ವರ್ಷಗಳ ಜಿಎಸ್‌ಟಿ ಪರಿಹಾರವನ್ನು ಈಗಾಗಲೇ ರಾಜ್ಯಗಳಿಗೆ ಪಾವತಿಸಲಾಗಿದೆ. ಪರಿಹಾರ ನಿಧಿಯಲ್ಲಿ ಸಂಗ್ರಹಣೆಯು ಅಗತ್ಯಕ್ಕಿಂತ ಕಡಿಮೆಯಿರುವುದರಿಂದ, 2020-21 ಮತ್ತು 2021-22ಕ್ಕೆ, ಕೇಂದ್ರವು ಕ್ರಮವಾಗಿ ₹1.10 ಲಕ್ಷ ಕೋಟಿ ಮತ್ತು ₹ 1.59 ಲಕ್ಷ ಕೋಟಿ ಹಣವನ್ನು ಸಾಲವಾಗಿ ಪಡೆದಿದೆ ಮತ್ತು ಅದನ್ನು ರಾಜ್ಯಗಳಿಗೆ ನೀಡಿದೆ ಎಂದು ನಿರ್ಮಲಾ ತಿಳಿಸಿದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾನೂನಿನಡಿಯಲ್ಲಿ 2017ರ ಜುಲೈ 1ರಿಂದ ಜಿಎಸ್‌ಟಿ ಅನುಷ್ಠಾನಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.