ಯೋಗೇಶ್ ಕದಂ
ಚಿತ್ರಕೃಪೆ: ಎಕ್ಸ್
ಮುಂಬೈ: ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಕಾರ್ಯಕರ್ತರು ಠಾಣೆಯ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಯೋಗೇಶ್ ಕದಂ, ಮಹಾರಾಷ್ಟ್ರದಲ್ಲಿ ಮರಾಠಿ ಮಾತನಾಡಲೇಬೇಕು ಎಂದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ನೀವು ಮಹಾರಾಷ್ಟ್ರದಲ್ಲಿದ್ದರೆ ಮರಾಠಿ ಮಾತನಾಡಬೇಕು. ಮರಾಠಿ ಗೊತ್ತಿಲ್ಲ ಎಂಬ ಉದ್ಧಟತನ ತೋರಿಸಬಾರದು. ಮಹಾರಾಷ್ಟ್ರದಲ್ಲಿದ್ದು ಮರಾಠಿಗೆ ಅಗೌರವ ತೋರುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
‘ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಅವರು(ಎಂಎನ್ಎಸ್ ಕಾರ್ಯಕರ್ತರು) ಪ್ರಕರಣ ದಾಖಲಿಸಬಹುದಿತ್ತು. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು’ ಎಂದೂ ಹೇಳಿದ್ದಾರೆ.
ಬೇಕರಿ ಮಾಲೀಕನೊಬ್ಬ ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಆತನ ಮೇಲೆ ಎಂಎನ್ಎಸ್ ಕಾರ್ಯಕರ್ತರು ಹಲ್ಲೆ ನಡೆಸಿರುವ ವಿಡಿಯೊ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಮರಾಠಿ ಮಾತನಾಡುವಂತೆ ಒತ್ತಾಯಿಸಿದ್ದಲ್ಲದೇ ನಾಲ್ಕೈದು ಬಾರಿ ಮಾಲೀಕನ ಕೆನ್ನೆಗೆ ಹೊಡೆದಿದ್ದಾರೆ.
ಎಂಎನ್ಎಸ್ ಕಾರ್ಯಕರ್ತರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.