ADVERTISEMENT

ನನ್ನ ಮಾತು ನೆನಪಿಡಿ: ಸರ್ಕಾರ ಕಾಯ್ದೆ ಹಿಂಪಡೆಯಲೇಬೇಕಾಗುತ್ತದೆ: ರಾಹುಲ್ ಗಾಂಧಿ

ಏಜೆನ್ಸೀಸ್
Published 14 ಜನವರಿ 2021, 10:20 IST
Last Updated 14 ಜನವರಿ 2021, 10:20 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ಮಧುರೈ: ಗುರುವಾರದಂದು ತಮಿಳುನಾಡಿನ ಅವನಿಯಪುರಂನಲ್ಲಿ 'ಜಲ್ಲಿಕಟ್ಟು' ಕ್ರೀಡೆಯನ್ನು ವೀಕ್ಷಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿವಾದಿತ ಮೂರು ಕೃಷಿ ಕಾಯ್ದೆಗಳನ್ನುಕೇಂದ್ರ ಸರ್ಕಾರವು ಹಿಂಪಡೆಯಲೇಬೇಕಾಗುತ್ತದೆ ಎಂದು ಹೇಳಿದರು.

'ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ'ಎಂದು ರಾಹುಲ್ ಗಾಂಧಿ ಪುನರುಚ್ಛರಿಸಿದರು.

ಕೆಲವೇ ಕೆಲವು ಉದ್ಯಮಿಗಳ ಹಿತಕ್ಕಾಗಿ ರೈತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಬಂದಾಗ ಜನರಿಗೆ ನೆರವು ಮಾಡಿಲ್ಲ. ನೀವು ಯಾರ ಪ್ರಧಾನಿ? ನೀವು ಭಾರತದ ಪ್ರಧಾನ ಮಂತ್ರಿಯೇ ಅಥವಾ ಆಯ್ದ ಎರಡು ಮೂರು ಉದ್ಯಮಿಗಳ ಪ್ರಧಾನ ಮಂತ್ರಿಯೇ ಎಂದು ರಾಹುಲ್ ಗಾಂಧಿ ಆಕ್ರೋಶ ತೋಡಿಕೊಂಡರು.

ADVERTISEMENT

ರೈತರ ಪ್ರತಿಭಟನೆಯನ್ನು ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ. ಎರಡು ಮೂರು ಉದ್ಯಮ ಸ್ನೇಹಿತರ ಲಾಭಕ್ಕಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಸಂಚು ರೂಪಿಸಿದೆ. ಸರ್ಕಾರವು ರೈತರಿಗೆ ಸೇರಿದ್ದನ್ನು ತಮ್ಮ 2-3 ಸ್ನೇಹಿತರಿಗೆ ನೀಡಲು ಬಯಸುತ್ತಿದೆ. ಇದೇ ಇಲ್ಲಿ ನಡೆಯುತ್ತಿದೆ ಎಂದು ಆರೋಪ ಮಾಡಿದರು.

ಇದನ್ನೂ ಓದಿ:

ರೈತರು ದೇಶದ ಬೆನ್ನೆಲುಬು. ರೈತರ ಮೇಲೆ ದಬ್ಬಾಳಿಕೆ ಮಾಡಿ ದೇಶವನ್ನು ಮುನ್ನಡೆಸಬಹುದು ಎಂದು ಭಾವಿಸಿದ್ದಲ್ಲಿ ಇತಿಹಾಸವನ್ನು ಗಮನಿಸಿ. ರೈತರು ದುರ್ಬಲರಾದಗೆಲ್ಲ ದೇಶವೇ ದುರ್ಬಲವಾಗಿದೆ ಎಂದು ಹೇಳಿದರು.

ನಮ್ಮ ಗಡಿಯೊಳಗೆ ಚೀನಾ ಏನನ್ನು ಮಾಡುತ್ತಿದೆ?
ಭಾರತದ ಗಡಿಯನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬುದನ್ನು ಮಗದೊಮ್ಮೆ ರಾಹುಲ್ ಗಾಂಧಿ ಆರೋಪಿಸಿದರು. ಚೀನಾದ ಜನರು ಭಾರತೀಯ ಗಡಿಯೊಳಗೆ ಏಕೆ ಕುಳಿತಿದ್ದಾರೆ? ಯಾಕೆ ಈ ಬಗ್ಗೆ ಪ್ರಧಾನ ಮಂತ್ರಿಗೆ ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ? ಚೀನಾ ಸೇನೆಯು ಭಾರತದ ಭೂಪ್ರದೇಶದಲ್ಲಿ ಕುಳಿತಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಏಕೆ ಮೌನ ವಹಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.