ADVERTISEMENT

ಪುಣೆಯ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ದುರಂತ: 18 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 18:35 IST
Last Updated 7 ಜೂನ್ 2021, 18:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಇಲ್ಲಿನ ಮುಲ್ಶಿ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಢದಲ್ಲಿ 15 ಮಂದಿ ಮಹಿಳೆಯರು ಸೇರಿ 18 ಜನರು ಮೃತಪಟ್ಟಿದ್ದಾರೆ.

ಪಿರಂಗುಟ್ ಗ್ರಾಮದಲ್ಲಿರುವ ‘ಎಸ್‌ವಿಎಸ್‌ ಅಕ್ವಾ ಟೆಕ್ನಾಲಜೀಸ್’ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದೆ. ಸುಮಾರು 20 ಮಂದಿ ಪಾರಾಗಿದ್ದಾರೆ. ಬೆಂಕಿಯಿಂದ ತೀವ್ರವಾಗಿ ಸುಟ್ಟಿದ್ದ ಶವಗಳನ್ನು ಹೊರತೆಗೆಯಲಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಬೆಂಕಿಯಿಂದಾಗಿ ವಾತಾವರಣವನ್ನು ದಟ್ಟ ಹೊಗೆ ಆವರಿಸಿತ್ತು. ಸ್ಥಳಕ್ಕೆ ಪುಣೆ ಜಿಲ್ಲಾಧಿಕಾರಿ ಡಾ.ರಾಜೇಶ್ ದೇಶಮುಖ್, ಪುಣೆ ಗ್ರಾಮಾಂತರ ಎಸ್‌ಪಿ ಡಾ. ಅಭಿನವ್ ದೇಶಮುಖ್ ಮತ್ತು ಇತರೆ ಹಿರಿಯ ಅಧಿಕಾರಿಗಳು ಧಾವಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ ₹ 2 ಲಕ್ಷ, ಗಾಯಗೊಂಡವರಿಗೆ ₹ 50 ಸಾವಿರ ಪರಿಹಾರ ಘೋಷಿಸಿದೆ.

ADVERTISEMENT

ಮಹಾರಾಷ್ಟ್ರ ಕೈಗಾರಿಕಾಭಿವೃದ್ಧಿ ನಿಗಮ ಮತ್ತು ಪುಣೆ ಮೆಟ್ರೊಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೂ ಸ್ಥಳಕ್ಕೆ ಧಾವಿಸಿದ್ದಾರೆ.

ಮೃತದೇಹಗಳನ್ನು ಪುಣೆಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಕಾರ್ಖಾನೆಯಲ್ಲಿ ಒಟ್ಟು 37 ಮಂದಿ ಕಾರ್ಯನಿರ್ವಹಿಸುತ್ತಿದ್ದರು. 18 ಮಂದಿ ಮೃತಪಟ್ಟಿದ್ದು, ಉಳಿದವರನ್ನು ರಕ್ಷಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.