ಲಖನೌ: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮರುಪರಿಶೀಲನೆ ಮಾಡುವಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಕಾಯ್ದೆ ‘ಅನುಮಾನ ಮತ್ತು ಆತಂಕ’ಗಳಿಂದ ಕೂಡಿದೆ ಎಂದು ಹೇಳಿದ್ದಾರೆ.
ಬರೇಲಿ ಜಿಲ್ಲೆಯಲ್ಲಿ ಯುವತಿಯೊಬ್ಬರ ತಂದೆ ನೀಡಿದ ದೂರಿನನ್ವಯ ಈ ನೂತನ ಕಾಯ್ದೆಯಡಿ ಶನಿವಾರ ಮೊದಲ ಪ್ರಕರಣ ದಾಖಲಾಗಿದೆ.
‘ತನ್ನದೇ ಗ್ರಾಮದ ಉವೇಶ್ ಅಹ್ಮದ್ ಆಸೆ ತೋರಿಸಿ, ನನ್ನ ಮಗಳನ್ನು ಮತಾಂತರಗೊಳಿಸಲು ಯತ್ನಿಸುತ್ತಿದ್ದಾನೆ ಎಂದು ಟೀಕಾರಾಮ್ ದೂರು ನೀಡಿದ್ದಾರೆ’ ಎಂದು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದರು.
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಾಯಾವತಿ ಅವರು,‘ಉತ್ತರ ಪ್ರದೇಶ ಸರ್ಕಾರವು ತರಾತುರಿಯಲ್ಲಿ ಲವ್ ಜಿಹಾದ್ ವಿರುದ್ಧ ಹೊರಡಿಸಿದ ಸುಗ್ರೀವಾಜ್ಞೆ ಅನುಮಾನ ಮತ್ತು ಆತಂಕಗಳಿಂದ ಕೂಡಿದೆ. ನಮ್ಮ ದೇಶದಲ್ಲಿ ವಂಚನೆ ಮತ್ತು ಒತ್ತಾಯಪೂರ್ವಕ ಮತಾಂತರಕ್ಕೆ ಯಾವುದೇ ಮಾನ್ಯತೆಯಿಲ್ಲ. ಈಗಾಗಲೇ ಇದಕ್ಕಾಗಿ ಹಲವಾರು ಕಾನೂನುಗಳಿವೆ. ಹಾಗಾಗಿ ಉತ್ತರ ಪ್ರದೇಶ ಸರ್ಕಾರವು ಈ ಹೊಸ ಕಾಯ್ದೆ ಬಗ್ಗೆ ಮರುಪರಿಶೀಲನೆ ಮಾಡಬೇಕು’ ಎಂದರು.
ವಿಧಾನಸಭೆಯಲ್ಲಿ ಹೊಸ ಮತಾಂತರ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹೇಳಿದ್ದರು.
ಈ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಶನಿವಾರ ಅಂಕಿತ ಹಾಕಿದರು. ಈ ಕಾಯ್ದೆಯಡಿ ಅಪರಾಧಿಗೆ 10 ವರ್ಷ ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.