ADVERTISEMENT

ಬಿಎಸ್‌ಪಿಯನ್ನು ಅಧಿಕಾರಕ್ಕೆ ತರಲು ಬ್ರಾಹ್ಮಣ, ದಲಿತರು ಒಗ್ಗಟ್ಟಾಗಬೇಕು: ಮಾಯಾವತಿ

ಪಿಟಿಐ
Published 7 ಸೆಪ್ಟೆಂಬರ್ 2021, 11:07 IST
Last Updated 7 ಸೆಪ್ಟೆಂಬರ್ 2021, 11:07 IST
ಮಾಯಾವತಿ
ಮಾಯಾವತಿ   

ಲಖನೌ: ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು (ಎಸ್‌ಪಿ) ಕೇವಲ ಭರವಸೆಗಳನ್ನಷ್ಟೇ ನೀಡುತ್ತಿದ್ದು, ಅವುಗಳನ್ನು ಈಡೇರಿಸುವುದಿಲ್ಲ. ಹೀಗಾಗಿ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಯನ್ನು ಮತ್ತೆ ಅಧಿಕಾರಕ್ಕೇರುವಂತೆ ಮಾಡಲು ಬ್ರಾಹ್ಮಣರು ಮತ್ತು ದಲಿತರು ಒಗ್ಗಟ್ಟಾಗಬೇಕು ಎಂದು ಪಕ್ಷದ ವರಿಷ್ಠೆ ಮಾಯಾವತಿ ಕರೆ ನೀಡಿದ್ದಾರೆ.

ಬ್ರಾಹ್ಮಣರನ್ನು ಪಕ್ಷದತ್ತ ಸೆಳೆಯುವ ಸಲುವಾಗಿ ತಿಂಗಳ ಕಾಲ ಹಮ್ಮಿಕೊಳ್ಳಲಾಗಿದ್ದ ‘ಪ್ರಬುದ್ಧ ವರ್ಗ ಸಮ್ಮೇಳನ’ದ ಸಮಾರೋಪದ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿ ಮತ್ತು ಎಸ್‌ಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎರಡೂ ಪಕ್ಷಗಳು ಬ್ರಾಹ್ಮಣರ ಮತ್ತು ದಲಿತರ ಮತಗಳನ್ನು ಸೆಳೆಯುವುದಕ್ಕಾಗಿ ಮಾತನಾಡುವುದು ಬಿಟ್ಟರೆ ಸಮುದಾಯಗಳ ಹಿತಾಸಕ್ತಿ ಕಾಪಾಡಲು ಏನೂ ಕೆಲಸ ಮಾಡುತ್ತಿಲ್ಲ ಎಂದು ಮಾಯಾವತಿ ದೂರಿದ್ದಾರೆ.

ಬಿಜೆಪಿ ಮತ್ತು ಎಸ್‌ಪಿಗಳಂತಲ್ಲದೆ ಬಿಎಸ್‌ಪಿಯು ಹೇಳಿದ್ದನ್ನು ಮಾಡಿ ತೋರಿಸುವ ಪಕ್ಷವಾಗಿದೆ. 2007ರಿಂದ 2012ರ ವರೆಗೆ ರಾಜ್ಯದಲ್ಲಿ ಪಕ್ಷವು ಆಡಳಿತ ನಡೆಸಿದ್ದಾಗ ದಲಿತರ ಮತ್ತು ಬ್ರಾಹ್ಮಣರ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಅನೇಕ ಕೆಲಸಗಳನ್ನು ಮಾಡಿತ್ತು. ಜತೆಗೆ ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ಕ್ರಮ ಕೈಗೊಂಡಿತ್ತು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮೀರತ್ ಮತ್ತು ಮುಜಪ್ಫರ್‌ನಗರದಲ್ಲಿ ನಡೆದಿದ್ದ ಕೋಮು ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಏನೂ ಕ್ರಮ ಕೈಗೊಂಡಿರಲಿಲ್ಲ ಎಂದು ಟೀಕಿಸಿದ್ದಾರೆ.

ಅಧಿಕಾರ ದೊರೆತರೆ ರಾಜ್ಯದಲ್ಲಿ ಉದ್ಯಾನವನಗಳು ಮತ್ತು ‘ಸ್ಮಾರಕ’ಗಳನ್ನು ನಿರ್ಮಿಸುವುದರ ಬದಲು ಅಭಿವೃದ್ಧಿಯ ಮೇಲೆ ಮಾತ್ರ ಗಮನ ಹರಿಸಲಿದ್ದೇನೆ ಎಂದೂ ಮಾಯವತಿ ಹೇಳಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.