ಸಾವು
(ಪ್ರಾತಿನಿಧಿಕ ಚಿತ್ರ)
ಮೇರಠ್: ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ 30 ವರ್ಷದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೆಲಸದ ವೇಳೆ ನಿದ್ದೆಗೆ ಜಾರಿ, ಕರ್ತವ್ಯ ಲೋಪವೆಸಗಿದ್ದ ಇಬ್ಬರು ಕಿರಿಯ ವೈದ್ಯರನ್ನು ಸ್ಥಳೀಯಾಡಳಿತವು ಅಮಾನತುಗೊಳಿಸಿದೆ. ವೈದ್ಯರು ನಿದ್ದೆ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ವೈದ್ಯರ ನಿರ್ಲಕ್ಷ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆಸ್ಪತ್ರೆ ಹಾಗೂ ಜಿಲ್ಲಾಡಳಿತವು ಪ್ರತ್ಯೇಕ ತನಿಖೆಗೆ ಆದೇಶಿಸಿದೆ.
‘ಇಲ್ಲಿನ ಹಸನ್ಪುರ ಗ್ರಾಮದ ನಿವಾಸಿ ಸುನಿಲ್ ಅವರು ಭಾನುವಾರ ರಾತ್ರಿ 12.30ಕ್ಕೆ ಅಪಘಾತಕ್ಕೊಳಗಾಗಿದ್ದರು. ತಕ್ಷಣವೇ ಅವರನ್ನು ಇಲ್ಲಿನ ಲಾಲಾ ಲಜಪತ್ರಾಯ್ ಮೆಮೊರಿಯಲ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ (ಎಲ್ಆರ್ಎಂ) ಕರೆತರಲಾಗಿತ್ತು. ಅವರು ಸೋಮವಾರ ಬೆಳಿಗ್ಗೆ 8 ಗಂಟೆಗೆ ಮೃತಪಟ್ಟರು’ ಎಂದು ಗ್ರಾಮದ ಮುಖಂಡ ಜಗ್ಗಿ ಪ್ರಧಾನ್ ತಿಳಿಸಿದರು.
‘ಸುನಿಲ್ ಅತ್ಯಂತ ಗಂಭೀರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದರೂ ಯಾವ ಸಿಬ್ಬಂದಿಯೂ ಚಿಕಿತ್ಸೆ ನೀಡಲು ಮುಂದೆ ಬಂದಿರಲಿಲ್ಲ. ವೈದ್ಯರು ಹಾಗೂ ದಾದಿಯರು ನಿದ್ದೆ ಮಾಡುತ್ತಿದ್ದರು’ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.