ADVERTISEMENT

ಕಾಶ್ಮೀರ: ಎನ್‌ಸಿ ಕರೆದಿದ್ದ ಸಭೆಗೆ ತಡೆ

ಜುಲ್ಫಿಕರ್ ಮಜಿದ್
Published 5 ಆಗಸ್ಟ್ 2020, 21:40 IST
Last Updated 5 ಆಗಸ್ಟ್ 2020, 21:40 IST
ಶ್ರೀನಗರದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ, ಸಂಭ್ರಮಿಸಿದರು– ಎಎಫ್‌ಪಿ ಚಿತ್ರ
ಶ್ರೀನಗರದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ, ಸಂಭ್ರಮಿಸಿದರು– ಎಎಫ್‌ಪಿ ಚಿತ್ರ   

ಶ್ರೀನಗರ: ವಿಶೇಷ ಸ್ಥಾನ ತೆಗೆದು ಹಾಕಿದ್ದರ ವಿಚಾರದಲ್ಲಿ ರಾಜಕೀಯ ಹೋರಾಟದ ದಿಕ್ಕು ನಿರ್ಧರಿಸಲು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಅವರು ಕರೆದಿದ್ದ ಸಭೆಗೆ, ರಾಜಕೀಯ ನಾಯಕರು ಹಾಜರಾಗದಂತೆ ಜಮ್ಮು–ಕಾಶ್ಮೀರ ಆಡಳಿತವು ನೋಡಿಕೊಂಡಿದೆ. ಈ ಮೂಲಕ ಸಭೆ ವಿಫಲವಾಗುವಂತೆ ಮಾಡಿದೆ.

ವಿಶೇಷ ಸ್ಥಾನ ತೆಗೆದುಹಾಕಿ ಒಂದು ವರ್ಷ ಸಂದ ದಿನವೇ ಫಾರೂಕ್‌ ಅವರು, ಜಮ್ಮು–ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದರು. 2019ರ ಆಗಸ್ಟ್‌ 4ರಂದೂ ಫಾರೂಕ್‌ ಅವರ ಗುಪ್ಕಾರ್‌ ನಿವಾಸದಲ್ಲಿ ಸಭೆ ನಡೆಸಿ, ನಿರ್ಣಯ ಸ್ವೀಕರಿಸಲಾಗಿತ್ತು. ಈ ನಿರ್ಣಯವನ್ನು ಗುಪ್ಕಾರ್ ಘೋಷಣೆಗಳು ಎಂದು ಕರೆಯಲಾಗಿತ್ತು. ವಿಶೇಷಾಧಿಕಾರವನ್ನು ಮರಳಿ ಪಡೆಯುವುದರ ಬಗ್ಗೆ ಬುಧವಾರ ಗುಪ್ಕಾರ್ ನಿವಾಸದಲ್ಲಿ ಸಭೆ ಕರೆಯಲಾಗಿತ್ತು.

ಆದರೆ, ಬುಧವಾರ ಗುಪ್ಕಾರ್‌ ರಸ್ತೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿತ್ತು. ರಸ್ತೆಯ ಪ್ರವೇಶಭಾಗದಲ್ಲಿ ಬ್ಯಾರಿಕೇಡ್‌ಗಳು ಮತ್ತು ಮುಳ್ಳುತಂತಿಗಳನ್ನು ಹಾಕಲಾಗಿತ್ತು. ಪ್ರವೇಶ ನಿಷೇಧಿಸಲಾಗಿತ್ತು.

ADVERTISEMENT

‘ಒಂದು ವರ್ಷ ಆಯಿತು, ಇದು ಇಂದಿನ ಗುಪ್ಕಾರ್ ರಸ್ತೆ. ನಮ್ಮ ಗೇಟಿನ ಎದುರು ಪೊಲೀಸ್ ವಾಹನಗಳು ನಿಂತಿವೆ’ ಎಂದು ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. ಬಿಗಿಬಂದೋಬಸ್ತ್‌ನ ಚಿತ್ರವನ್ನೂ ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕರು ಶ್ರೀನಗರದ ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುತ್ತಿರುವ ಚಿತ್ರವನ್ನೂ ಒಮರ್ ಟ್ವೀಟ್ ಮಾಡಿದ್ದಾರೆ.

‘ಸಭೆಯಲ್ಲಿ ಭಾಗವಹಿಸಬೇಕಿದ್ದ ಬೇರೆ ಪಕ್ಷಗಳ ನಾಯಕರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿತ್ತು’ ಎಂದು ಪ್ರತ್ಯಕ್ಷದರ್ಶಿ
ಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

* ಇಲ್ಲಿ ರಾಜಕೀಯ ಪ್ರಕ್ರಿಯೆ ಆರಂಭವಾಗಿದೆ ಎಂದು ಬಿಜೆಪಿ ಸರ್ಕಾರ ಹೇಳುತ್ತಲೇ ಇದೆ. ಆದರೆ, ರಾಜಕೀಯ ನಾಯಕರು ನನ್ನ ಮನೆಯಲ್ಲಿ ಸಭೆ ಸೇರಲು ಇಲ್ಲಿನ ಆಡಳಿತ ಬಿಡುತ್ತಿಲ್ಲ

-ಫಾರೂಕ್ ಅಬ್ದುಲ್ಲಾ, ಎನ್‌ಸಿ ಅಧ್ಯಕ್ಷ

* ಇಲ್ಲಿ ಸಾಮಾನ್ಯ ಸ್ಥಿತಿ ಇದೆ ಎಂದು ಸರ್ಕಾರ ಹೇಳುತ್ತಿದೆ. ಯಾವುದು ಸಾಮಾನ್ಯ ಸ್ಥಿತಿ? ರಾಜಕೀಯ ನಾಯಕರು ಸಭೆ ಸೇರಲೂ ಬಿಡದಿರುವುದು ಸಾಮಾನ್ಯ ಸ್ಥಿತಿಯೇ?

-ಮೊಹಮ್ಮದ್ ಯೂಸುಫ್ ತಾರಿಗಾಮಿ, ಸಿಪಿಎಂ ನಾಯಕ

* ಶ್ರೀನಗರದ ಎಲ್ಲೆಡೆ ಇನ್ನೂ ಸೆಕ್ಷನ್ 144 ಜಾರಿಯಲ್ಲಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಕಾನೂನನ್ನು ಉಲ್ಲಂಘಿಸಿ, ಗುಂಪು ಸೇರುವುದಕ್ಕೆ ನಾವು ಅವಕಾಶ ನೀಡುವುದಿಲ್ಲ

-ಶ್ರೀನಗರ ಪೊಲೀಸರು

* ಇದು ಬಿಜೆಪಿಯ ಬೂಟಾಟಿಕೆ. ಅವರು ಮಾತ್ರ ಗುಂಪು ಸೇರಬಹುದು, ಸಂಭ್ರಮಿಸಬಹುದು. ಆದರೆ, ನಾವೆಲ್ಲಾ ಸಭೆ ಸೇರುವಂತಿಲ್ಲ, ಜಮ್ಮು–ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬುದನ್ನು ಚರ್ಚಿಸುವಂತಿಲ್ಲ

-ಒಮರ್ ಅಬ್ದುಲ್ಲಾ, ಎನ್‌ಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.