ಗುವಾಹಟಿ: ಮೇಘಾಲಯದ ಪೂರ್ವ ಜೈಂಟಿಯಾ ಜಿಲ್ಲೆಯಲುಂಥಾರಿ ಕಲ್ಲಿದ್ದಲಿನ ಅಕ್ರಮ ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣಾ ಕಾರ್ಯ ಮತ್ತಷ್ಟು ವಿಳಂಬವಾಗಲಿದೆ ಎಂದು ರಾಷ್ಟ್ರೀಯ ವಿಕೋಪ ಪ್ರತಿಸ್ಪಂದನಾ ಪಡೆ (ಎನ್ಡಿಆರ್ಎಫ್) ಹೇಳಿದೆ.
ಹೀಗಾಗಿ ಗಣಿಯಲ್ಲಿ ಸಿಲುಕಿರುವ 15 ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ.
ಸುರಂಗದ ತಳದಲ್ಲಿ ಶೇಖರವಾಗುತ್ತಿರುವ ನೀರನ್ನು ಹೊರಹಾಕಲು100 ಎಚ್ಪಿ ಸಾಮರ್ಥ್ಯದ ಪಂಪ್ಗಳು ಬೇಕಿವೆ.25 ಎಚ್ಪಿ ಸಾಮರ್ಥ್ಯದ ಎರಡು ಪಂಪ್ಗಳನ್ನಷ್ಟೇ ಬಳಸಲಾಗುತ್ತಿದೆ.ಹೀಗಾಗಿ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ.ದೊಡ್ಡ ಪಂಪ್ಗಳು ಬೇಕು ಎಂದು ಮೇಘಾಲಯ ಸರ್ಕಾರ ಡಿಸೆಂಬರ್ 22ರಂದು ‘ಕೋಲ್ ಇಂಡಿಯಾ’ ಕಂಪನಿಗೆ ಪತ್ರ ಬರೆದಿದೆ.
ಆದರೆ ಪತ್ರವು ಕೋಲ್ ಇಂಡಿಯಾಗೆ ಡಿಸೆಂಬರ್ 26ರಂದಷ್ಟೇ ತಲುಪಿದೆ.
‘ಲಭ್ಯವಿರುವ ಹಲವು ಪಂಪ್ಗಳನ್ನು ಮೇಘಾಲಯಕ್ಕೆ ಕಳುಹಿಸಲಾಗಿದೆ. ಅವಘಡದ ಸ್ಥಳ ತಲುಪಲು ಇನ್ನೂ 3–4 ದಿನ ಬೇಕಾಗಬಹುದು’ ಎಂದು ಕೋಲ್ ಇಂಡಿಯಾ ಹೇಳಿದೆ.
ನೆರವಿಗೆ ಕಿರ್ಲೋಸ್ಕರ್
ಗಣಿಯಲ್ಲಿನ ನೀರನ್ನು ಹೊರಹಾಕಲು ಬೇಕಿರುವ ಅಧಿಕ ಸಾಮರ್ಥ್ಯದ ಪಂಪ್ಗಳನ್ನು ಒದಗಿಸಲು ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ ಮುಂದೆ ಬಂದಿದೆ.ಕಂಪನಿಯ ತಜ್ಞರ ತಂಡವು ಈಗಾಗಲೇ ಲುಂಥಾರಾಗೆ ತಲುಪಿದೆ. ಅವಘಡದ ಸ್ಥಳವನ್ನು ಪರಿಶೀಲಿಸಿ, ಯಾವ ಸ್ವರೂಪದ ಪಂಪ್ ಅಗತ್ಯವಿದೆ ಎಂದು ತಂಡವು ತಿಳಿಸಲಿದ್ದಾರೆ. ಆನಂತರ ಪಂಪ್ ಅನ್ನು ಅಲ್ಲಿಗೆ ಕಳುಹಿಸಲಾಗುತ್ತದೆ ಎಂದು ಕಂಪನಿಯ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.