ಶ್ರೀನಗರ: ಇಲ್ಲಿನ ಪೂಂಛ್ಗೆ ಭೇಟಿ ನೀಡಲು ಅನುಮತಿ ನಿರಾಕರಿಸಿದ ಕಾರಣ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಶನಿವಾರ ರಜೌರಿ–ಪೂಂಛ್ ಹೆದ್ದಾರಿಯಲ್ಲಿಯೇ ಧರಣಿ ಕುಳಿತರು. ಇತ್ತೀಚೆಗೆ ಸೇನೆಯ ವಶದಲ್ಲಿದ್ದಾಗ ಮೃತಪಟ್ಟರು ಎನ್ನಲಾದ ಮೂವರು ನಾಗರಿಕರ ಕುಟುಂಬವನ್ನು ಭೇಟಿ ಮಾಡಲು ಅವರು ಅಲ್ಲಿಗೆ ತೆರಳುತ್ತಿದ್ದರು.
‘ರಾತ್ರಿ ಇಡೀ ಹೆದ್ದಾರಿಯಲ್ಲಿ ಕುಳಿತರೂ ಅವರು ಪ್ರತಿಭಟನೆಯನ್ನು ಕೈಬಿಡುವುದಿಲ್ಲ’ ಎಂದು ಅವರೊಂದಿಗೆ ಇರುವ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ನಾಯಕರು ಹೇಳಿದರು.
‘ಆಡಳಿತವು ನನಗೇಕೆ ಇಷ್ಟು ಹೆದರುತ್ತಿದೆ ಎಂದು ತಿಳಿಯುತ್ತಿಲ್ಲ. ಭದ್ರತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲ. ಆದರೂ ನನಗೆ ಅವಕಾಶ ನೀಡುತ್ತಿಲ್ಲ’ ಎಂದು ದೂರಿದರು.
‘ನನ್ನನ್ನು ಮಾತ್ರ ತಡೆಯಲಾಗುತ್ತಿದೆ. ಇತರರು ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಭದ್ರತಾ ಪಡೆಗಳ ರಹಸ್ಯ ಬಯಲಾಗುವುದು ಎಂಬ ಕಾರಣಕ್ಕಾಗಿ ತಡೆಯುತ್ತಿರಬಹುದು’ ಎಂದು ಹೇಳಿದರು.
‘ಸೇನಾಪಡೆಯು ಈ ಪ್ರದೇಶದ ಪುರುಷರಿಗೆ ಮಾತ್ರ ಅಲ್ಲ ಮಹಿಳೆಯರಿಗೂ ಕಿರುಕುಳ ನೀಡಿದೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.