ನವದೆಹಲಿ: ವಲಸೆ ಕಾರ್ಮಿಕರಿಗೆ ಉದ್ಯೋಗ ಅವಕಾಶಗಳನ್ನು ಗುರುತಿಸುವುದಕ್ಕಾಗಿ ಗ್ರಾಮ ಮತ್ತು ತಾಲ್ಲೂಕು ಮಟ್ಟದಲ್ಲಿ ಆಪ್ತಸಮಾಲೋಚನೆ ಕೇಂದ್ರಗಳನ್ನು ಆರಂಭಿಸಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಊರಿಗೆ ಮರಳಲು ಇಚ್ಛಿಸುವ ಎಲ್ಲ ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ಕಳುಹಿಸಲು ವ್ಯವಸ್ಥೆ ಮಾಡಬೇಕು. ಕೊರೊನಾ ಲಾಕ್ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡು, ಈಗಾಗಲೇ ಊರಿಗೆ ಮರಳಿರುವ ಮತ್ತು ಇನ್ನು ಮರಳಲಿರುವ ವಲಸೆ ಕಾರ್ಮಿಕರಿಗೆ ಹೊಸ ಉದ್ಯೋಗ ಅವಕಾಶಗಳನ್ನು ಹುಡುಕಿಕೊಡಬೇಕು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠವು ನಿರ್ದೇಶನ ನೀಡಿದೆ.
ವಲಸೆ ಕಾರ್ಮಿಕರು ಹಿಂದಿರುಗುವ ಪ್ರಕ್ರಿಯೆಯು ತಕ್ಷಣ ಮುಗಿದರೆ, ಅವರಿಗೆಪರ್ಯಾಯ ಉದ್ಯೋಗ, ಆಹಾರ ಮತ್ತುಪಡಿತರ ವಿತರಣೆಯ ಅಗತ್ಯಗಳ ಬಗ್ಗೆ ಮುಂದಿನ ಹಂತದಲ್ಲಿ ಗಮನ ಹರಿಸಬಹುದು ಎಂದು ಪೀಠವು ಹೇಳಿದೆ.
ನಿರ್ದೇಶನಗಳು
* ವಲಸೆ ಕಾರ್ಮಿಕರ ನೋಂದಣಿಗೆ ಸ್ಥಳೀಯ ಅಥವಾ ಪೊಲೀಸ್ ಠಾಣೆ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು
* ವಲಸಿಗರ ಪ್ರಯಾಣ ವ್ಯವಸ್ಥೆ ಬಗ್ಗೆ ಸ್ಥಳೀಯ ದಿನಪತ್ರಿಕೆಗಳು, ಸುದ್ದಿ ವಾಹಿನಿಗಳಲ್ಲಿ ಪ್ರಚಾರ ನೀಡಬೇಕು
* ವಲಸೆ ಕಾರ್ಮಿಕರಿಗಾಗಿ ರಾಜ್ಯವು ರೈಲಿಗೆ ಬೇಡಿಕೆ ಇಟ್ಟ 24 ತಾಸುಗಳಲ್ಲಿ ರೈಲ್ವೆಯು ಅದನ್ನು ಒದಗಿಸಬೇಕು
* ಊರಿಗೆ ಮರಳಿರುವ ವಲಸೆ ಕಾರ್ಮಿಕರ ಕೌಶಲ ಮತ್ತಿತರ ವಿವರ ಸಂಗ್ರಹಿಸಬೇಕು
* ವಲಸೆ ಕಾರ್ಮಿಕರ ವಿರುದ್ಧ ವಿಕೋಪ ನಿರ್ವಹಣೆ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ರದ್ದತಿಯನ್ನು ಪರಿಶೀಲಿಸಬೇಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.