ತಂಗದರ್ (ಜಮ್ಮು ಮತ್ತು ಕಾಶ್ಮೀರ): ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಲೀಪಾ ಕಣಿವೆಯಲ್ಲಿರುವ ಸೇನಾ ನೆಲೆಗಳನ್ನು ಭಾರತೀಯ ಸೇನೆಯು ಸಂಪೂರ್ಣವಾಗಿ ನಾಶ ಮಾಡಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗದರ್ನಲ್ಲಿನ ಎಲ್ಒಸಿ ಬಳಿ ಪಿಟಿಐ ಸುದ್ದಿ ಸಂಸ್ಥೆ ಪರಿಶೀಲನೆ ನಡೆಸಿದೆ. ಪಾಕಿಸ್ತಾನ ಸೇನಾ ನೆಲೆಗಳು ನಾಶವಾಗಿರುವುದು ಸತ್ಯ ಎಂದು ಪಿಟಿಐ ಹೇಳಿದೆ. ಭಾರತೀಯ ಸೇನೆಯ ಚಿನಾರ್ ಕೋರ್ ಪಡೆಯು ಪಾಕ್ ಸೇನಾ ನೆಲೆಗಳ ಮೇಲೆ ಮೇ ತಿಂಗಳ ಎರಡನೇ ವಾರ ‘ಆಪರೇಷನ್ ಸಿಂಧೂರ’ ವೇಳೆ ದಾಳಿ ನಡೆಸಿದೆ.
ಲೀಪಾ ಕಣಿವೆಯಲ್ಲಿ ಪಾಕಿಸ್ತಾನದ ಹಲವು ಸೇನಾ ನೆಲೆಗಳು ಇದ್ದವು. ಆದರೆ, ಅತಿ ಹೆಚ್ಚು ಹಾನಿ ಉಂಟು ಮಾಡುವ ಉದ್ದೇಶದಿಂದ ಹೆಚ್ಚು ಹಾನಿ ಉಂಟಾಗಬಲ್ಲ ನೆಲೆಗಳನ್ನೇ ಭಾರತೀಯ ಸೇನೆಯು ಆಯ್ದುಕೊಂಡು ನಿರ್ದಿಷ್ಟ ದಾಳಿ ನಡೆಸಿದೆ.
‘ಪಾಕ್ನ ಮೂರು ಸೇನಾ ನೆಲೆಗಳನ್ನು ನಾವು ಸಂಪೂರ್ಣ ನಾಶ ಮಾಡಿದ್ದೇವೆ. ಜೊತೆಗೆ, ಶಸ್ತ್ರಾಸ್ತ್ರ ಸಂಗ್ರಹಾಗಾರ, ತೈಲ ಸಂಗ್ರಹ ಘಟಕ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ ನಾಶ ಮಾಡಿದ್ದೇವೆ. ನಮ್ಮ ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ತನ್ನ ನೆಲೆಗಳನ್ನು ಪುನಃ ಕಟ್ಟಿಕೊಳ್ಳಲು ಪಾಕಿಸ್ತಾನಕ್ಕೆ ಕನಿಷ್ಠ 8ರಿಂದ12 ತಿಂಗಳು ಬೇಕಾಗಬಹುದು’ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ನಾವೇ ಅಭಿವೃದ್ಧಿಪಡಿಸಿದ ಆಕಾಶದೀಪ ರೇಡಾರ್ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ನಮ್ಮ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆಯು ಪಾಕ್ನ ವಾಯು ದಾಳಿಯನ್ನು ಸದೃಢವಾಗಿ ಎದುರಿಸಿತು. ನಮ್ಮ ಯಾವುದೇ ಸೇನಾ ಸೌಕರ್ಯಗಳಿಗೆ ಹಾನಿಯಾಗಿಲ್ಲ. ಆದರೆ, ನಮ್ಮ ಶತ್ರುಗಳ ನೆಲೆಗಳು ನಾಶವಾದವು’ ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.