ಮೊಹರಂ ಹಬ್ಬ
ಸಂಭಲ್/ಯುಪಿ: ಕೋಮು ಸೌಹಾರ್ದ ಕಾಪಾಡಲು ಮತ್ತು ಭದ್ರತೆ ದೃಷ್ಟಿಯಿಂದ ಚಿಕ್ಕ ಮಕ್ಕಳು ಮೊಹರಂ ಮೆರವಣಿಗೆಯಲ್ಲಿ ‘ತಜಿಯ’ ಮತ್ತು ‘ಆಲಂ’ ಪ್ರತಿಕೃತಿ ಹಿಡಿದು ಸಾಗುವುದನ್ನು ಸಂಭಲ್ ಪೊಲೀಸರು ನಿಷೇಧಿಸಿದ್ದಾರೆ.
ಮೊಹರಂ ಮೆರವಣಿಗೆ ಅಂಗವಾಗಿ ಬುಧವಾರ ಇಲ್ಲಿ ನಡೆದ ಸಮುದಾಯ ಪ್ರತಿನಿಧಿಗಳ ಸಭೆಯಲ್ಲಿ ಸಂಭಲ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ಕುಮಾರ್ ಶ್ರೀವಾಸ್ತವ ಈ ಸೂಚನೆ ನೀಡಿದರು. ‘ಮಕ್ಕಳು ‘ತಜಿಯ’ ಮತ್ತು ‘ಆಲಂ’ ಹಿಡಿದು ಸಾಗುವುದಕ್ಕೆ ಅವಕಾಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಮೆರವಣಿಗೆಯಲ್ಲಿ ಧಾರ್ಮಿಕ ಪ್ರತಿಕೃತಿಗಳು ವಿದ್ಯುತ್ ತಂತಿಗೆ ತಾಗಿ ಈ ಹಿಂದೆ ಅವಘಡ ಸಂಭವಿಸಿದ ಹಲವು ಉದಾಹರಣೆಗಳಿವೆ. ಹಾಗಾಗಿ ಮಕ್ಕಳಿಗೆ ‘ತಜಿಯ’ ಮತ್ತು ‘ಆಲಂ’ ಹಿಡಿದು ಸಾಗುವುದಕ್ಕೆ ಅವಕಾಶ ಇಲ್ಲ. ಅವರೂ ಮೆರಣಿಗೆಯಲ್ಲಿ ಭಾಗವಹಿಸಬಹುದು. ತಜಿಯ ಮತ್ತು ಆಲಂ ಹಿಡಿಯಲು ವಯಸ್ಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಜತೆಗೆ ಈ ಪ್ರತಿಕೃತಿಗಳ ಎತ್ತರವು 10 ಅಡಿ ಮೀರುವಂತಿಲ್ಲ’ ಎಂದು ಅವರು ಹೇಳಿದರು.
ಕಳೆದ ವರ್ಷ ಸಂಭಲ್ನ ಮಸೀದಿಯೊಂದರ ಸರ್ವೆ ಕಾರ್ಯಕ್ಕೆ ಮುಂದಾದಾಗ ಗಲಭೆ ನಡೆದು ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಾಗಾಗಿ ಈ ಬಾರಿ ಮೊಹರಂ ಮೆರವಣಿಗೆ ಮೇಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.