
ಚೆನ್ನೈ: ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಬೇಡಿಕೆಯನ್ನು ತಿರಸ್ಕರಿಸುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ‘ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ ನಡೆಯುವುದಿಲ್ಲ. ಕಾಂಗ್ರೆಸ್ ಜತೆಗಿನ ಡಿಎಂಕೆಯ ದೀರ್ಘಕಾಲೀನ ಮೈತ್ರಿಯು 2026ರ ವಿಧಾನಸಭೆ ಚುನಾವಣೆವರೆಗೆ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜತೆಗಿನ ತಮ್ಮ ಅತ್ಯುತ್ತಮ ಬಾಂಧವ್ಯದ ಕುರಿತು ಮಾತನಾಡಿರುವ ಸ್ಟಾಲಿನ್, ‘ನಮ್ಮ ಸಂಬಂಧವು ರಾಜಕೀಯವನ್ನು ಮೀರಿದೆ’ ಎಂದು ಹೇಳಿದ್ದಾರೆ.
‘ರಾಹುಲ್ ನನ್ನನ್ನು ಅಣ್ಣ ಎಂದು ಭಾವಿಸಿದ್ದಾರೆ. ನಾನು ಅವರನ್ನು ತಮ್ಮ ಎಂದುಕೊಂಡಿದ್ದೇನೆ. ರಾಹುಲ್ ತಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬರಾಗಿ ನನ್ನನ್ನು ಕಂಡಿದ್ದಾರೆ. ನಾನೂ ಕೂಡ ಅವರನ್ನು ಹಾಗೆಯೇ ಭಾವಿಸಿದ್ದೇನೆ’ ಎಂದು ಸ್ಟಾಲಿನ್ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
‘ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ ಕೆಲಸ ಮಾಡುವುದಿಲ್ಲ ಎನ್ನುವುದು ನಮಗೂ ತಿಳಿದಿದೆ ಅವರಿಗೂ (ಕಾಂಗ್ರೆಸ್) ಚೆನ್ನಾಗಿ ತಿಳಿದಿದೆ’ ಎಂದ ಸ್ಟಾಲಿನ್, ‘ಕೆಲವರು ಗುಪ್ತ ಉದ್ದೇಶಗಳೊಂದಿಗೆ ಮೈತ್ರಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ. ನಾವು ( ಡಿಎಂಕೆ) ಮತ್ತು ಅವರು (ಕಾಂಗ್ರೆಸ್) ಈ ಬಗ್ಗೆ ಚಿಂತಿತರಾಗಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.