ಶ್ರೀನಗರ: ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಸಾಧಾರಣ ಹಿಮಪಾತವಾಗಿದ್ದು, ಇದು ಪ್ರವಾಸೋದ್ಯಮ ಸಹಯೋಗದಲ್ಲಿ ಉದ್ಯಮ ನಡೆಸುತ್ತಿರುವವರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹೊಸ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ಹಿಮಪಾತವಾಗುತ್ತಿರುವ ಕಾರಣ, ಪ್ರವಾಸೋದ್ಯಮ ಗರಿಗೆದರಬಹುದು. ವ್ಯಾಪಾರ ವಹಿವಾಟು ವೃದ್ಧಿಸಬಹುದು ಎಂಬುದು ಇಲ್ಲಿನ ವ್ಯಾಪಾರಸ್ಥರ ನಿರೀಕ್ಷೆಯಾಗಿದೆ.
ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಬುಡ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಮಪಾತವಾಯಿತು. ದಕ್ಷಿಣ ಕಾಶ್ಮೀರದಲ್ಲಿ ಕುಲ್ಗಾಂ ಮತ್ತು ಅನಂತ್ನಾಗ್ ಜಿಲ್ಲೆಗಳಲ್ಲೂ ಸಾಧಾರಣವಾಗಿ ಹಿಮ ಸುರಿಯುತ್ತಿದೆ. ಉತ್ತರ ಕಾಶ್ಮೀರದ ಗುಲ್ಮಾರ್ಗ್ನಲ್ಲಿರುವ ಸ್ಕಿ–ರೆಸಾರ್ಟ್, ದಕ್ಷಿಣದಲ್ಲಿ ಪಹಲ್ಗಮ್ ರೆಸಾರ್ಟ್ ಮತ್ತು ಮಧ್ಯ ಕಾಶ್ಮೀರದ ಸೋನಮಾರ್ಗ್ ರೆಸಾರ್ಟ್ನಲ್ಲಿ ಹಿಮಪಾತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಗುರೆಝ್ ಸೇರಿದಂತೆ ಕಣಿವೆ ಪ್ರದೇಶಗಳಲ್ಲಿ, ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿ, ಜವಾಹರ್ ಸುರಂಗದಲ್ಲಿ ಸೋಮವಾರ ಹಿಮಪಾತವಾದ ವರದಿಯಾಗಿದೆ.
ಹೊಸ ವರ್ಷಾಚರಣೆಯ ಹೊಸ್ತಿಲಲ್ಲಿ ಹಿಮಪಾತವಾಗುತ್ತಿರುವ ಕಾರಣ, ದೇಶೀಯ ಪ್ರವಾಸಿಗರು ಮತ್ತು ಸ್ಥಳೀಯರು ಗುಲ್ಮಾರ್ಗ್ ಮತ್ತು ಪಹಲ್ಗಮ್ ಜಿಲ್ಲೆಯ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಸೋಮವಾರ ಒಂದೇ ದಿನ ಗುಲ್ಮಾರ್ಗ್ನಲ್ಲಿ 1200 ದೇಶೀಯ ಪ್ರವಾಸಿಗರು ಇದ್ದರು. 2500ಕ್ಕೂ ಹೆಚ್ಚು ಮಂದಿ ಕಣಿವೆ ರಾಜ್ಯದ ವಿವಿಧ ಸ್ಥಳಗಳಿಂದ ಬಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.