ಬೆಂಗಳೂರು: ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಿಧನ ಸುದ್ದಿ ಘೋಷಣೆಯಾಗುತ್ತಲೇ ಟ್ವೀಟ್ ಮಾಡಿರುವ ಮೋದಿ, ‘ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಲಕ್ಷಾಂತರ ಭಕ್ತರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ನೆಲಸಲಿದ್ದಾರೆ. ಧಾರ್ಮಿಕ ಮತ್ತು ಸೇವಾ ರಂಗದಲ್ಲಿ ಮೇರು ವ್ಯಕ್ತಿತ್ವವಾಗಿದ್ದ ಅವರು, ಮಾನವೀಯ ಸಮಾಜ ನಿರ್ಮಾಣದತ್ತ ಸದಾ ಕ್ರಿಯಾಶೀಲರಾಗಿದ್ದರು. ವಿಶ್ವೇಶ ತೀರ್ಥ ಸ್ವಾಮೀಜಿಗಳಿಂದ ಸಾಕಷ್ಟು ಕಲಿಯುವ ಅವಕಾಶ ಪಡೆದ್ದು ನನ್ನ ಪುಣ್ಯ. ಇತ್ತೀಚೆಗಷ್ಟೇ ಗುರುಪೂರ್ಣಿಮೆಯಂದು ಅವರನ್ನು ಮತ್ತೊಮ್ಮೆ ಭೇಟಿಯಾಗಲು ನನಗೆ ಸಿಕ್ಕ ಅವಕಾಶ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಅವರ ನಿಷ್ಕಾಮ ಜ್ಞಾನವು ಅವಿಸ್ಮರಣೀಯ,’ ಎಂದು ಅಭಿಪ್ರಾಯಪಟ್ಟಿದ್ದಾರೆ ಮೋದಿ.
ಕೇಂದ್ರ ಗೃಹ ಅಮಿತ್ ಶಾ ಅವರು ಟ್ವೀಟ್ ಮಾಡಿ, ‘ವಿಶ್ವೇಶ ತೀರ್ಥ ಸ್ವಾಮೀಜಿಯವರ ಅಗಲಿಕೆ ತೀವ್ರ ನೋವುಂಟು ಮಾಡಿದೆ. ಅವರು ಮಾನವೀಯ ಮೌಲ್ಯಗಳು ಮತ್ತು ಜ್ಞಾನದ ಪ್ರತಿರೂಪ. ಜನ ಕಲ್ಯಾಣ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆ ಸರಿಸಾಟಿ ಇಲ್ಲದ್ದು. ಅವರು ಧನಾತ್ಮಕ ಚಿಂತನೆಯ ಬುಗ್ಗೆಯಂತಿದ್ದರು. ಅವರ ಚಿಂತನೆಗಳು ನಮಗೆ ಮಾರ್ಗದರ್ಶಕ. ಅವರ ಆಶೀರ್ವಾದ ಪಡೆದದ್ದು ನನ್ನ ಪುಣ್ಯ. ಆಧ್ಯಾತ್ಮ ಜಗತ್ತಿಗೆ ಅವರ ಅಗಲಿಕೆ ಅಪಾರ ನಷ್ಟ ಉಂಟು ಮಾಡಿದೆ,’ ಎಂದಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ, ‘ಭಾರತ ಇಂದು ದಿವ್ಯ ಸಂತತನ್ನು ಕಳೆದುಕೊಂಡಿದೆ. ಸಮಾಜದ ಹಲವು ಉತ್ತಮ ಕಾರ್ಯಗಳಿಗೆ ಅವರು ಪ್ರೇರಕ ಶಕ್ತಿಯಾಗಿದ್ದರು,’ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.