ನವದೆಹಲಿ: ಕೋವಿಡ್ ಪರಿಸ್ಥಿತಿ ದೇಶದಲ್ಲಿ ಹದಗೆಡುತ್ತಿರುವುದರ ನಡುವೆಯೂ ಪ್ರಧಾನಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಟುವಾಗಿ ಟೀಕಿಸಿರುವ ಸಿಪಿಎಂ, ‘ಮೋದಿ ಪ್ರಧಾನಿಯಾಗಿ ಅಲ್ಲ, ಪಕ್ಷದ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಹರಿಹಾಯ್ದಿದೆ.
‘ನಾವು ಭಾರತೀಯರು ಕೋವಿಡ್ ಪರಿಸ್ಥಿತಿಯಿಂದ ನರಳುತ್ತಿದ್ದೇವೆ. ದುರದೃಷ್ಟವಶಾತ್ ನಮಗೆ ಕೇಂದ್ರ ಸರ್ಕಾರವಿಲ್ಲ. ಸದ್ಯಕ್ಕೆ ನಮಗಿರುವುದು ಪಿ.ಆರ್ ಕಂಪನಿ, ಅದಕ್ಕೊಬ್ಬರು ಚುನಾವಣಾ ಪ್ರಚಾರಕರ್ತ. ಅವರು ನಿಷ್ಠುರ, ಲಜ್ಜೆಗೇಡಿತನದಿಂದ ಸಮೂಹದ ಮೇಲೆ ದುಃಖ ಮತ್ತು ವಿನಾಶವನ್ನು ಹೇರುತ್ತಿದ್ದಾರೆ’ ಎಂದು ಸಿಪಿಎಂ ಟೀಕಿಸಿದೆ.
ಮೋದಿ ಪ್ರಧಾನಿ ಸ್ಥಾನಕ್ಕಿಂತಲೂ ಪ್ರಚಾರಕರ್ತನಾಗಿದ್ದಾರೆ. ಅದಕ್ಕಾಗಿಯೇ ಅವರಿಗೆ ಚುನಾವಣಾ ಪ್ರಚಾರ ಮುಖ್ಯವಾಗಿದೆ. ಸಮಯ ಉಳಿದರೆ ಟಿ.ವಿಗಳಿಗೆ, ಸುದ್ದಿ ಶೀರ್ಷಿಕೆಗಳಿಗೆ ನೆರವಾಗುವಂತೆ ಏನಾದರೂ ಪರಿಪೂರ್ಣವಾಗಿ ಮಾಡುತ್ತಾರೆ. ಇದೊಂದು ಅಸಹಾಯಕ ಸ್ಥಿತಿ’ ಎಂದು ಪಕ್ಷದ ಪ್ರದಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ.
ದಶಕದಲ್ಲಿಯೇ ಅತ್ಯಂತ ಗಂಭೀರವಾದ ಸ್ಥಿತಿಗೆ ಭಾರತ ಸಾಕ್ಷಿಯಾಗುತ್ತಿದೆ. ಸೇನೆಯ ಮಾಜಿ ಮುಖ್ಯಸ್ಥರು ಇದನ್ನು ಯುದ್ಧಕ್ಕೆ ಸಮನಾದುದು ಎಂದು ಬಣ್ಣಿಸುತ್ತಾರೆ. ಸಮಸ್ಯೆಗೆ ಸ್ಪಂದಿಸಲು ಮುಖ್ಯಮಂತ್ರಿಗಳ ಮಾತಿಗೂ ಸಿಗದೇ ಸೋಂಕು ಪ್ರಸಾರ ನೆರವಾಗುವ ಸಭೆಗಳ ಮೂಲಕ ಗಿಮಿಕ್ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಂಕು ಸ್ಥಿತಿ ಹಿನ್ನೆಲೆಯಲ್ಲಿ ತಮ್ಮ ಪಕ್ಷ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದ ಸಭೆ ನಡೆಸುವುದಿಲ್ಲ ಎಂದು ಹೇಳಿತ್ತು. ಕಾಂಗ್ರೆಸ್ ಕೂಡಾ ಇದೇ ನಿಲುವು ತಳೆದಿದೆ. ಆದರೆ, ಗೃಹ ಮಂತ್ರಿಯೂ ಆಗಿರುವ ಬಿಜೆಪಿ ನಾಯಕ ಅವೈಜ್ಞಾನಿಕವಾಗಿ ವರ್ತಿಸುತ್ತಿದ್ದಾರೆ. ಜನರ ಜೀವಕ್ಕಿಂತಲೂ ಅವರ ಪ್ರಚಾರ ಸಭೆಯೇ ದೊಡ್ಡದೇ? ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.