ನವದೆಹಲಿ: ಕೋವಿಡ್–19 ಪಿಡುಗಿನಿಂದಾಗಿ ಉದ್ಬವಿಸಿರುವ ಪರಿಸ್ಥಿತಿಯಕುರಿತು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಹಾಗೂ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚರ್ಚೆ ನಡೆಸಿದರು.
‘ರಾಜಪಕ್ಸೆ ಅವರ ನಾಯಕತ್ವದಲ್ಲಿ, ಶ್ರೀಲಂಕಾ ಕೋವಿಡ್–19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತಿದೆ’ ಎಂದು ಮೋದಿ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ. ‘ಪಿಡುಗಿನ ವಿರುದ್ಧದ ಹೋರಾಟ ಹಾಗೂ ಪಿಡುಗಿನಿಂದಾಗಿ ಆರ್ಥಿಕತೆ ಮೇಲೆ ಆದಂಥ ಪ್ರಭಾವ ಎದುರಿಸುವಲ್ಲಿನೆರೆರಾಷ್ಟ್ರವಾದ ಶ್ರೀಲಂಕಾಗೆ ಭಾರತದ ಬೆಂಬಲ ಮುಂದುವರಿಯಲಿದೆ. ಶ್ರೀಲಂಕಾದಲ್ಲಿ ಭಾರತದ ನೆರವಿನೊಂದಿಗೆ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ಚುರುಕು ನೀಡಲು ಹಾಗೂ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.
ಮಾರಿಷಸ್ನಲ್ಲಿ ಜುಗ್ನೌತ್ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ಲಾಘಿಸಿರುವ ಮೋದಿ, ‘ಇಂಥ ಕಷ್ಟದ ಸಂದರ್ಭದಲ್ಲಿ ಭಾರತ ಮಾರಿಷಸ್ ಜೊತೆಗಿರಲಿದೆ’ ಎಂದು ತಿಳಿಸಿದ್ದಾರೆ. ಆಪರೇಷನ್ ಸಾಗರ್ ಭಾಗವಾಗಿ ನೌಕಾಸೇನೆ ಹಡಗು ‘ಕೇಸರಿ’ಯಲ್ಲಿ ಮಾರಿಷಸ್ಗೆ ಔಷಧಿ ಹಾಗೂ 14 ಸದಸ್ಯರಿದ್ದ ವೈದ್ಯಕೀಯ ತಂಡವನ್ನು ಕಳುಹಿಸಿಕೊಟ್ಟಿರುವುದಕ್ಕೆ ಮೋದಿ ಅವರಿಗೆ ಜುಗ್ನೌತ್ ಅಭಿನಂದನೆ ಸಲ್ಲಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.