ನವದೆಹಲಿ: ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರೈತರ ಮುಖಂಡರ ನಡುವಣ 10ನೇ ಸುತ್ತಿನ ಮಾತುಕತೆ ಮುಂದುವರಿದಿದೆ. ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ರೈತ ಮುಖಂಡರ ಮುಂದಿಟ್ಟಿದೆ. ಆದರೆ, ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಅವರು ಪಟ್ಟುಹಿಡಿದಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡುವ ವಿಷಯಕ್ಕೆ ಸಂಬಂಧಿಸಿ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ರೈತ ನಾಯಕರು ಆರೋಪಿಸಿದ್ದಾರೆ.
ಇವತ್ತಿನ ಮಾತುಕತೆಯ ಮೊದಲ ಹಂತದಲ್ಲಿ ಒಮ್ಮತಕ್ಕೆ ಬರಲಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಕೆಲವು ರೈತರಿಗೆ ಎನ್ಐಎ ನೋಟಿಸ್ ನೀಡಿದ ವಿಚಾರವೂ ಮಾತುಕತೆ ವೇಳೆ ಪ್ರಸ್ತಾಪವಾಗಿದೆ. ಇದು ಪ್ರತಿಭಟನೆಯನ್ನು ಬೆಂಬಲಿಸುವವರಿಗೆ ಕಿರುಕುಳ ನೀಡುವ ಹುನ್ನಾರ ಎಂದೂ ರೈತ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಗಮನಹರಿಸುವುದಾಗಿ ಸರ್ಕಾರದ ಪ್ರತಿನಿಧಿಗಳು ಆಶ್ವಾಸನೆ ನೀಡಿದ್ದಾರೆ.
ಇಂದಿನ ಮಾತುಕತೆಯಿಂದ ಯಾವುದೇ ಫಲಿತಾಂಶ ಹೊರಬರಬಹುದು ಎಂಬ ಭರವಸೆಯಿಲ್ಲ. ಎರಡೂ ಕಡೆಯವರು (ರೈತರು– ಸರ್ಕಾರ) ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ ಎಂದು ‘ಭಾರತೀಯ ಕಿಸಾನ್ ಯೂನಿಯನ್’ನ ಪ್ರಧಾನ ಕಾರ್ಯದರ್ಶಿ ಯದುವೀರ್ ಸಿಂಗ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.