ADVERTISEMENT

ಮಧ್ಯಪ್ರದೇಶ: ಒಳನುಸುಳುವಿಕೆಗೆ ಕಡಿವಾಣ –ಶಾ

ಪಿಟಿಐ
Published 11 ನವೆಂಬರ್ 2023, 14:11 IST
Last Updated 11 ನವೆಂಬರ್ 2023, 14:11 IST
ಅಮಿತ್‌ ಶಾ
ಅಮಿತ್‌ ಶಾ   

ಧಾರ್‌, ಮಧ್ಯಪ್ರದೇಶ (ಪಿಟಿಐ): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಗಡಿಯಲ್ಲಿ ಒಳನುಸುಳುವಿಕೆಯನ್ನು ತಡೆದಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕುರಿತ ವಿಧಿ 370 ಅನ್ನು ಹಿಂಪಡೆಯುವ ಧೈರ್ಯವನ್ನೂ ತೋರಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಕಾಂಗ್ರೆಸ್‌ ಅಥವಾ ವಿರೋಧಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ನಾಯಕರಿಂದ ಇದು ಸಾಧ್ಯವಾಗಿರಲಿಲ್ಲ ಎಂದು ಧಾರ್ ಜಿಲ್ಲೆಯ ಮನವರ್‌ನಲ್ಲಿ ಶನಿವಾರ ನಡೆದ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಅವರು ಟೀಕಿಸಿದರು.

‘ಒಳನುಸುಳುವಿಕೆಯನ್ನು ಮೋದಿ ತಡೆದಿದ್ದಾರೆ. ತಡೆದಿದ್ದಾರೋ ಇಲ್ಲವೊ’ ಎಂದು ಸಭಿಕರನ್ನು ಪ್ರಶ್ನಿಸಿದರು. ನವೆಂಬರ್ 17ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ.

ADVERTISEMENT

ವಿಧಿ 370 ಅನ್ನು ಹಿಂಪಡೆದರೆ ರಕ್ತಪಾತವಾಗಲಿದೆ ಎಂದು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಎಚ್ಚರಿಸಿದ್ದರು. ಮೋದಿ ಸರ್ಕಾರ ವಿಧಿಯನ್ನು ಹಿಂಪಡೆಯಿತು. ಆದರೆ, ರಾಹುಲ್ ಎಚ್ಚರಿಸಿದ್ದಂತೆ ಏನೂ ಆಗಲಿಲ್ಲ ಎಂದು ಅಭಿಪ್ರಾಯಪಟ್ಟರು.

2018ರ ಚುನಾವಣೆ ಬಳಿಕ ರಾಜ್ಯದಲ್ಲಿ 15 ತಿಂಗಳು ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು, ‘ತೀರ್ಥ ದರ್ಶನ ಯೋಜನೆ’ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿತು ಎಂದು ಆರೋಪಿಸಿದರು.

ರಾಜ್ಯದ ಜನರಿಗೆ ಈಗ ಮೂರು ಬಾರಿ ದೀಪಾವಳಿ ಆಚರಿಸುವ ಸಮಯ ಬಂದಿದೆ. ಮೊದಲನೆಯದಾಗಿ ಭಾನುವಾರ, 2ನೆಯದಾಗಿ ಮತಎಣಿಕೆ ನಡೆಯುವ ಡಿ.3ರಂದು ಹಾಗೂ ಅಯೋಧ್ಯೆಯಲ್ಲಿ ರಾಮಮೂರ್ತಿ ಪ್ರತಿಷ್ಠಾಪಿಸುವ ಜ. 22ರಂದು ಮೂರನೆಯ ಬಾರಿಗೆ ದೀಪಾವಳಿ ಆಚರಿಸಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.