ADVERTISEMENT

ದೇಶದ ರಾಜಕೀಯದ ಬಗ್ಗೆ ಕಾಂಗ್ರೆಸ್‌ ಗಂಭೀರವಾಗಿಲ್ಲದ ಕಾರಣ ಮೋದಿ ಬಲಿಷ್ಠ: ಮಮತಾ

ಪಿಟಿಐ
Published 30 ಅಕ್ಟೋಬರ್ 2021, 13:25 IST
Last Updated 30 ಅಕ್ಟೋಬರ್ 2021, 13:25 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಪಣಜಿ: ಕಾಂಗ್ರೆಸ್‌ ಪಕ್ಷವು ದೇಶದ ರಾಜಕೀಯದ ಬಗ್ಗೆ ಗಂಭೀರವಾಗಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠರಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದರು.

ರಾಜಕೀಯದಲ್ಲಿ ಕಾಂಗ್ರೆಸ್‌ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳದ ಕಾರಣ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದ ಅವರು, ದೆಹಲಿಯಲ್ಲಿ ದಾದಾಗಿರಿ ಬೆದರಿಕೆಯ ತಂತ್ರ ಸಾಕಷ್ಟು ಆಗಿದೆ. ಇದು ಇನ್ನು ಸಾಕು ಎಂದು ಅವರಿ ಕೇಂದ್ರ ಬಿಜೆಪಿ ಸರ್ಕಾರವನ್ನೂ ಟೀಕಿಸಿದರು.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾಗೆ ಭೇಟಿ ನೀಡಿರುವ ಅವರು, ಪಣಜಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ADVERTISEMENT

‘ಕಾಂಗ್ರೆಸ್‌ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸದ ಕಾರಣ ಪ್ರಧಾನಿ ಮೋದಿ ಬಲಿಷ್ಠರಾಗಿದ್ದಾರೆ. ಹೀಗೇ ಮುಂದುವರಿದರೆ ಅವರು ಇನ್ನಷ್ಟು ಬಲಿಷ್ಠರಾಗುತ್ತಾರೆ. ಯಾರೋ ಒಬ್ಬರು ಸೂಕ್ತ ನಿರ್ಧಾರ ತೆಗೆದುಕೊಳ್ಳದ ಕಾರಣಕ್ಕೆ ಇಡೀ ದೇಶ ಏಕೆ ಸಂಕಷ್ಟ ಅನುಭವಿಸಬೇಕು’ ಎಂದು ಅವರು ಪ್ರಶ್ನಿಸಿದರು.

‘ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಬೇಕು ಎಂದು ನಾನು ಬಯಸುತ್ತೇನೆ. ಒಕ್ಕೂಟ ವ್ಯವಸ್ಥೆ ಬಲವಾಗಬೇಕು. ಅದಕ್ಕಾಗಿ ರಾಜ್ಯಗಳು ಬಲಿಷ್ಠವಾಗಬೇಕು. ಅವುಗಳು ಶಕ್ತವಾದರೆ ಕೇಂದ್ರ ಇನ್ನಷ್ಟು ಬಲಿಷ್ಠವಾಗುತ್ತದೆ’ ಎಂದ ಅವರು, ದೆಹಲಿಯ ಬೆದರಿಸುವಿಕೆಯ ತಂತ್ರ ನಮಗೆ ಬೇಡ, ಅದು ಸಾಕು’ ಎಂದು ಅವರು ಹೇಳಿದರು.

‘ನಾನು ಬೇರೆ ಯಾವುದೇ ರಾಜಕೀಯ ಪಕ್ಷದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನನ್ನ ಪಕ್ಷದ ಬಗ್ಗೆ ಮಾತ್ರ ಹೇಳಬಲ್ಲೆ. ಚುನಾವಣೆಯಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ, ಬಿಜೆಪಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.