ನವದೆಹಲಿ (ಪಿಟಿಐ): ಮೊಸರು, ಲಸ್ಸಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಹೇರಿಕೆ ಮಾಡಿರುವ ಕೇಂದ್ರದ ನಿಲುವಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ‘ದೇಶವನ್ನು ಶೋಚನೀಯ ಸ್ಥಿತಿಗೆ ತಳ್ಳಲು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ‘ಕರಾಮತ್ತು’ ಇದು’ ಎಂದು ವಿರೋಧ ಪಕ್ಷಗಳು ಕಿಡಿಕಾರಿವೆ.
ಮೋದಿ ಸರ್ಕಾರದ ನಡೆಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದೆ.
‘ಕೇಂದ್ರ ಸರ್ಕಾರದ ನಿಲುವು, ಈಗಾಗಲೇ ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿರುವ ನಾಗರಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ’ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ, ‘ಮೊದಲು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಹೆಚ್ಚಳ ಮಾಡಲಾಗಿತ್ತು. ಇನ್ನು ಮುಂದೆ ಮೊಸರು, ಹಿಟ್ಟು ಹಾಗೂ ಧಾನ್ಯಗಳ ಬೆಲೆಯೂ ಗಗನಮುಖಿಯಾಗಲಿದೆ. ಮೋದಿ ಜೀ ತಮ್ಮ ಕೋಟ್ಯಾಧಿಪತಿ ಗೆಳೆಯರ ಬೊಕ್ಕಸ ತುಂಬಿಸಲು ಮಧ್ಯಮ ವರ್ಗದವರ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ವಿದ್ಯುತ್ ದರ ಹೆಚ್ಚಳವೂ ಸನ್ನಿಹಿತವಾಗಿದೆ’ ಎಂದು ದೂರಿದ್ದಾರೆ.
‘ಮೋದಿ ಸರ್ಕಾರವು ಕೋಟ್ಯಧಿಪತಿಗಳ ಮೇಲೆ ತೆರಿಗೆ ಹೇರಿ ದೇಶದ ಆದಾಯ ಹೆಚ್ಚಿಸಲಿ. ಅಗತ್ಯ ವಸ್ತುಗಳ ದರ ಏರಿಸುವ ಮೂಲಕ ನಾಗರಿಕರ ಮೇಲೆ ನಡೆಸುತ್ತಿರುವ ಕ್ರಿಮಿನಲ್ ಆಕ್ರಮಣ ನಿಲ್ಲಿಸಲಿ’ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ.
‘ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಜಿಎಸ್ಟಿ ವಿಚಾರದಲ್ಲಿ ಕೇಂದ್ರದ ನಿಲುವನ್ನು ಟೀಕಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ ಜಾಫರ್ ಇಸ್ಲಾಂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.